- Advertisement -
- Advertisement -
ಶೃಂಗೇರಿ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕುಂಠಿತಗೊಂಡಿದ್ದು, ಶಾಸಕರು ಹಾಗೂ ಸಂಸದರು ಜನರಿಗೆ ಸೂಕ್ತವಾದ ಅಭಿವೃದ್ದಿಕಾರ್ಯ ಹಾಗೂ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜನತಾ ಪಕ್ಷದ ಪದಾಧಿಕಾರಿಗಳು ತಿಳಿಸಿದರು. ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ ರಾಜೇಂದ್ರ ಅವರು ಶೃಂಗೇರಿಯ ಕೆವಿಆರ್ ರಸ್ತೆಯಲ್ಲಿರುವ ಹೋಟೆಲ್ ಅದ್ವೈತ್ ಲ್ಯಾನ್ಸರ್ ನ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಷೇತ್ರ ಜನತಾ ಪಕ್ಷದ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಕ್ಷೇತ್ರದ ಅಭಿವೃದ್ದಿಯ ಕುರಿತು ಮಾತನಾಡಿ, ಶೃಂಗೇರಿ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಾಸಕರು ಹಾಗೂ ಸಂಸದರು ವಿಫಲರಾಗಿದ್ದಾರೆ. ಅತ್ಯವಶ್ಯಕವಾದ ನೂರು ಹಾಸಿಗೆಗಳ ಆಸ್ಪತ್ರೆ, 110 ಕೆ.ವಿ ವಿದ್ಯುತ್ ಸ್ಥಾವರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ಕುರಿತಾದ ಸಮಸ್ಯೆ, 24 ಗಂಟೆ ಕುಡಿಯುವ ನೀರು ಸೇರಿದಂತೆ ಈ ಭಾಗದ ಜನರಿಗೆ ಗಂಭೀರವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿರುವುದು ಕಂಡು ಬಂದಿದೆ. ಅವರ ನಿರ್ಲಕ್ಷ್ಯದಿಂದಾಗಿ ಅನೇಕ ಸಮಸ್ಯೆಗಳು ತಲೆದೋರಿದೆ ಎಂದರು.
ಇನ್ನೂ ಈ ಬಾರಿ ಜನರು ಮೂರೂ ಪಕ್ಷಗಳನ್ನು ಬದಿಗಿಟ್ಟು ನಮ್ಮ ಜನತಾ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ಧೃಢ ವಿಶ್ವಾಸವಿದೆ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಸಂಪೂರ್ಣ ಬಹುಮತಗಳಿಸಲು ಸಾಧ್ಯವಿಲ್ಲ ಎಂದರು. ಜನತಾ ಪಕ್ಷದ ಧೃಢ ಸಂಕಲ್ಪವೇ ಕನಿಷ್ಠ 23 ಶಾಸಕರನ್ನು ಈ ಬಾರಿ ವಿಧಾನಸಭೆಗೆ ಕಳುಹಿಸುವುದಾಗಿದೆ ಎಂದರು. ಜನತಾ ಪಕ್ಷದ ಕ್ಷೇತ್ರಾಧ್ಯಕ್ಷರಾಗಿ ಆಯ್ಕೆಗೊಂಡ ಕೆ.ಎಸ್ ವೆಂಕಪ್ಪಾಚಾರ್ಯ ರಾಜ್ಯದಲ್ಲಿ ನಾಲ್ಕನೇ ಶಕ್ತಿಯಾಗಿ ಜನತಾ ಪಕ್ಷ ಹೊರಹೊಮ್ಮಲಿದ್ದು ಶೃಂಗೇರಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ ರಾಜೇಂದ್ರ, ರಾಜ್ಯ ಉಪಾಧ್ಯಕ್ಷ ಹೊನ್ನೇಗೌಡ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಜಿತ್ ಗೌಡ ಬೇಸೂರು, ಮೈಸೂರು ಜಿಲ್ಲಾಧ್ಯಕ್ಷ ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- Advertisement -