ಕುಂದಾಪುರ: ಕೊಲ್ಲೂರು ಅಭಯಾರಣ್ಯ ವ್ಯಾಪ್ತಿಯ ಜಡ್ಕಲ್, ಮುದೂರು ಗ್ರಾಮ ಡೆಂಗ್ಯೂ ಜ್ವರಬಾಧೆಯಿಂದ ನಲುಗಿದೆ. ಕಳೆದ 15 ದಿನಗಳಿಂದೀಚೆಗೆ ಏಕಾಏಕಿ ಡೆಂಗ್ಯೂನಿಂದ 80ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಮುದೂರು ಗ್ರಾಮದ ಉದಯನಗರ ವ್ಯಾಪ್ತಿಯಲ್ಲಿ ಪ್ರಕರಣ ಹೆಚ್ಚು ಕಂಡುಬಂದಿದೆ.
ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣದ ಹಿನ್ನೆಲೆಯಲ್ಲಿ ಜಡ್ಕಲ್, ಮುದೂರು ಪರಿಸರಲ್ಲಿ 3 ಕ್ಕೂ ಹೆಚ್ಚು ಅಂಬ್ಯುಲೆನ್ಸ್ ನಿಯೋಜಿಸಲಾಗಿದೆ. ರಾತ್ರಿ ಹಗಲೆನ್ನದೆ ಓಡಾಟ ನಡೆಸುತ್ತಿರುವ ಅಂಬ್ಯುಲೆನ್ಸ್ ಕೋವಿಡ್ ಮೊದಲ ಅಲೆ ನೆನಪಿಸುವಂತಿದೆ.
ರಬ್ಬರ್, ಅಡಿಕೆ ತೋಟ ಹೆಚ್ಚಿಗೆ ಹೊಂದಿರುವ ಈ ಭಾಗದಲ್ಲಿ ದಿನೇ ದಿನೇ ಡೆಂಗ್ಯೂ ಉಲ್ಬಣವಾಗುತ್ತಲಿದೆ. ವೈದ್ಯರ ತಂಡ ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ಇಲ್ಲಿನ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ಗಿಡುವ ಗರಟೆಯಲ್ಲಿ ನಿಂತ ನೀರಿನಲ್ಲಿ ಸೊಳ್ಳೆ ಉತ್ಪಾದನೆಗೊಂಡು ಇದರಿಂದ ಡೆಂಗ್ಯೂ ಹಬ್ಬುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಾಕತಾಳೀಯ ಎಂಬಂತೆ ರಬ್ಬರ್ ಪ್ಲಾಂಟೇಶನ್ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮನೆಗಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಇದೇ ಪ್ರಥಮ ಬಾರಿಗೆ ಅರಣ್ಯದಂಚಿನ ಗ್ರಾಮಗಳಲ್ಲಿ ಡೆಂಗ್ಯೂ ಉಪಟಳ ಮೇರೆ ಮೀರಿದ್ದು ಗ್ರಾಮಸ್ಥರಲ್ಲಿ ದಿಗಿಲು ಹುಟ್ಟಿಸಿದೆ.
ಎರಡುವರೆ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಡೆಂಗ್ಯೂ ಪ್ರಕರಣ ಕಳೆದ ಎರಡು ವಾರಗಳಿಂದೀಚೆಗೆ ವಿಪರೀತ ಎಂಬಂತೆ ವ್ಯಾಪಿಸಿಕೊಂಡಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗ್ಯೂ ಸ್ಪೆಷಲ್ ವಾರ್ಡ್ ತೆರೆಯಲಾಗಿದೆ. 100ಕ್ಕೂ ಮಿಕ್ಕಿ ಡೆಂಗ್ಯೂ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಜನರು ದೊಡ್ಡ ಪ್ರಮಾಣದಲ್ಲಿ ಸಂಕಟ ಎದುರಿಸುತ್ತಿದ್ದರೂ, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣೆತ್ತಿಯೂ ನೋಡುವ ಕೆಲಸ ಮಾಡುತ್ತಿಲ್ಲ ಎಂಬುವುದು ಸ್ಥಳೀಯರ ಆರೋಪ.