ಬೆಳ್ತಂಗಡಿ: ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ಮನೆ ಚಂದ್ರಶೇಖರ ಪೂಜಾರಿಯ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಿಗಳಾದ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ರವರುಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ನ.07 ರಂದು ಸೋಮವಾರ ಧರ್ಮಸ್ಥಳ ಠಾಣೆಯ ಮುಂಭಾಗ ಅಮರಣಾಂತ ಧರಣಿ ಮಾಡುವುದಾಗಿ ಚಂದ್ರಶೇಖರ್ ತಂದೆ ಆನಂದ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಟೀಯಲ್ಲಿ ನಡೆಸಿದ ಅವರು, ದ.ಕ.ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರಿನ ಪತ್ರವನ್ನು ಬರೆದಿದಿದ್ದಾರೆ. ಅದರಲ್ಲಿ ಚಂದ್ರಶೇಖರನು ಅಣಿಯೂರಿನ ಶಬರಿ ಸ್ವ ಸಹಾಯ ಸಂಘದ ಸದಸ್ಯನಾಗಿದ್ದು, ಸದ್ರಿ ಸಂಘದಲ್ಲಿ ೮ ಜನ ಸದಸ್ಯರಿದ್ದು, ಕಳೆದ ವರ್ಷ ಸದ್ರಿ ಸಂಘಕ್ಕೆ ಉಜಿರೆ ವಿಶ್ವಕರ್ಮ ಬ್ಯಾಂಕಿನಿಂದ ರೂ. ೪,೦೦,೦೦೦/- (ರೂ. ನಾಲ್ಕು ಲಕ್ಷ) ಸಾಲವನ್ನು ನೀಡಿದ್ದ. ಸದ್ರಿ ಹಣವನ್ನು ೮ ಜನ ಸದಸ್ಯರುಗಳು ಹಂಚಿಕೊಂಡಿದ್ದು ಚಂದ್ರಶೇಖರನ ಹೆಸರಿನಲ್ಲಿ ಯೋಗೀಶ ಎಂಬವನು ಹಣ ಪಡೆದುಕೊಂಡು ನಂತರ ಕಂತು ಹಣವನ್ನು ತುಂಬದೆ ನನ್ನ ಮಗ ಚಂದ್ರಶೇಖರನೇ ಹಣ ಕಟ್ಟುವಂತೆ ತಾಕೀತು ಮಾಡಿದ್ದಾನೆ. ಈ ಬಗ್ಗೆ ನನ್ನ ಮಗ ಆತನಿಗೆ ದೂರವಾಣಿ ಕರೆ ಮಾಡಿದಾಗ ಆತ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಮೆಸೇಜ್ ಮಾಡಿ ಹಣ ಕಟ್ಟುವಂತೆ ಕೋರಿದಾಗ ಸಹ ಆತ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅಲ್ಲದೆ ಸ್ವ ಸಹಾಯ ಸಂಘದ ಸದಸ್ಯರುಗಳಾದ ನೆರಿಯ ಗ್ರಾಮ ಪಂಚಾಯತ್ ಸದಸ್ಯ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ಎಂಬವರುಗಳು ಎಲ್ಲಾ ಹಣವನ್ನು ನೀನೇ ಕಟ್ಟಬೇಕು ಎಂದು ತಾಕೀತು ಮಾಡಿರುವುದಾಗಿ ಆತ ಮನೆಯಲ್ಲಿ ಹೇಳುತ್ತಿದ್ದ. ಈ ಮಧ್ಯೆ ದಿನಾಂಕ: ೨೩.೦೮.೨೦೨೨ ರಂದು ಸಂಜೆ ೦೫.೩೦ ಗಂಟೆಗೆ ನನ್ನ ಮಗ ಚಂದ್ರಶೇಖರನು ಮನೆಯ ಕಡೆ ಬರುವಾಗ ನೆರಿಯ ಗ್ರಾಮದ ಬಯಲು ಬಸ್ಸು ನಿಲ್ದಾಣದ ಬಳಿ ಆರೋಪಿಗಳಾದ ಸಚಿನ್, ಯೋಗೀಶ್, ನಾರಾಯಣ ಮತ್ತು ಸುದರ್ಶನ್ ರವರುಗಳು ಆತನನ್ನು ತಡೆದು ನಿಲ್ಲಿಸಿ ನಾವು ಸಂಘದ ಸಾಲ ಕಟ್ಟುವುದಿಲ್ಲ ಬೇಕಿದ್ದರೆ ನೀನೇ ಕಟ್ಟು ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೇ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಇದರಿಂದ ಮನನೊಂದ ಮಗ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಚಂದ್ರಶೇಖರ್ ತಂದೆ ಆರೋಪಿಸಿದ್ದಾರೆ.

ಆರೋಪಿಗಳ ಪೈಕಿ ಸಚಿನ್ ಎಂಬಾತನು ನಮ್ಮನ್ನು ಯಾರಿಂದಲು ಏನು ಮಾಡೋದಕ್ಕೂ ಆಗಲ್ಲ ಎಂದು ಹೇಳಿಕೊಂಡು ರಾಜಾರೋಷವಾಗಿ ತಿರುಗಾಡಿಕೊಂಡಿರುತ್ತಾರೆ. ಇದರಿಂದಾಗಿ ನಮಗೆ ಭಯ ಉಂಟಾಗಿರುತ್ತದೆ ಎಂದೂ ಉಲ್ಲೇಖಿಸಿದ್ದಾರೆ.