ಕಡಬ: ಶಾಲೆಯಲ್ಲಿ ಅಡಿಕೆ ತೋಟ ನಿರ್ಮಿಸಿ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿ ನಿಂತಿದ್ದ ಅಲಂಕಾರಿನ ಕೊಯಿಲ ಗ್ರಾಮದ ಕೊಯಿಲ ಕೆ ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ.
ಶಾಲಾ ಆವರಣಕ್ಕೆ ಪ್ರವೇಶಿಸಿದ ಯಾರೋ ಕಿಡಿಗೇಡಿಗಳು ಆವರಣದಲ್ಲಿನ ಕೃಷಿ ತೋಟಕ್ಕೆ ಮತ್ತು ಕುಡಿಯುವ ನೀರಿಗಾಗಿ ಅಳವಡಿಸಿದ ಪೈಪುಗಳು , ನಳ್ಳಿಗಳು ಹಾಗೂ ಗೇಟಿನ ಸರಳುಗಳಿಗೆ ಹಾನಿ ಮಾಡಿದ್ದಾರೆ.
ಈ ಬಗ್ಗೆ ಶಾಲಾಭಿವೃದ್ದಿ ಸಮಿತಿ ಕಡಬ ಠಾಣೆಗೆ ದೂರು ನೀಡಿದೆ. ಕುಡಿಯುವ ನೀರಿನ ಎರಡು ನಳ್ಳಿಗಳನ್ನು , ಮೂರು ಕಡೆ ಕೃಷಿ ತೋಟದ ಪೈಪುಗಳನ್ನು ಮುರಿದು ಹಾಕಿದ್ದಾರೆ ಪಾಪಿಗಳು. ಆವರಣಕ್ಕೆ ಪ್ರವೇಶಿಸುವ ಮುಖ್ಯ ದ್ವಾರದ ಗೇಟಿನ ಸರಳನ್ನು ಮುರಿದಿದ್ದಾರೆ. ಮಂಗಳವಾರ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ನಿನ್ನೆ ಕೃಷಿ ತೋಟದ ಕೆಲಸ ಸಂಬಂದ ಎಸ್ ಡಿ ಎಂ ಸಿ ಪದಾಧಿಕಾರಿಗಳು ಶಾಲಾ ಆವರಣಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಅಲ್ಲದೇ ಕೃತ್ಯದ ವಿರುದ್ದ ಶಾಲಾಭಿವೃದ್ದಿ ಸಮಿತಿ, ಪೋಷಕರು ದೈವಗಳ ಮೊರೆ ಹೋಗಿದ್ದಾರೆ. ಈ ಬಗ್ಗೆ ಶಾಲಾ ಆವರಣದಲ್ಲಿ ಬ್ಯಾನರ್ ಆಳವಡಿಸಲಾಗಿದೆ. ಈ ಕೃತ್ಯ ಎಸೆದವರಿಗೆ ಆತೂರು ಶ್ರೀ ದುಗಾಲಯಿ ದೈವ , ಬರಮೇಲು ಶ್ರೀ ಶಿರಾಡಿ ದೈವ, ನೆಹರುತೋಟ ಶ್ರೀ ಕೊರಗಜ್ಜ ದೈವಕ್ಕೆ ಹರಕೆ ಹೇಳಿದ್ದೇವೆ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.