ಮಧುರೈ : ಪ್ರೀತಿಸಿದ ಹುಡುಗಿಯನ್ನು ಪಡೆಯೋದಕ್ಕೆ ಹುಡುಗರು ಏನೆಲ್ಲಾ ಸರ್ಕಸ್ ಮಾಡ್ತಾರೆ ನಿಮಗೆಲ್ಲಾ ಗೊತ್ತೇ ಇದೆ.ಆದರೆ ಪ್ರಾಣಿಗಳು ಕೂಡ ಇದೇ ರೀತಿ ಗಾಢ ಪ್ರೀತಿಯಲ್ಲಿ ಇರುತ್ತವೆ ಅಂದ್ರೆ ನಿಮಗೆಲ್ಲಾ ಅಚ್ಚರಿಯಾಗಬಹುದು. ಆದ್ರೆ ಆದ್ರೆ ತಮಿಳುನಾಡಿನ ಮಧುರೈನಲ್ಲಿ ಇಂತಹದ್ದೇ ಒಂದು ಅಚ್ಚರಿಯ ಘಟನೆ ನಡೆದಿದೆ.
ಮಂಜಮಲಿ ಎಂಬ ಗೂಳಿಯೊಂದು ತಾನು ಪ್ರೀತಿಸಿದ ಹಸುವನ್ನು ಬಿಟ್ಟಿರೋದಕ್ಕೆ ಸಾಧ್ಯವಾಗದೇ ಪಟ್ಟ ಪರಿತಾಪ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ್ದಾಗೆ ಆಗಿದ್ದು ಇಷ್ಟು. ತಮಿಳುನಾಡಿನ ಮಧುರೈನಲ್ಲಿ ಲಕ್ಷ್ಮೀ ಎಂಬ ಹಸು ಹಾಗೂ ಪಾಲಾಮೇದು ಮಂದಿರಕ್ಕೆ ಸೇರಿದ ಮಂಜಮಲಿ ಎಂಬ ಗೂಳಿ ಸದಾ ಜೊತೆಯಾಗಿ ಇರುತ್ತಿದ್ದವು. ಇತ್ತೀಚೆಗೆ ಲಕ್ಷ್ಮೀಯ ಮಾಲೀಕ ಆಕೆಯನ್ನು ಮಾರಾಟ ಮಾಡಿದ್ದ.ಅದಕ್ಕಾಗಿ ಲಕ್ಷ್ಮೀಯನ್ನು ಕೊಂಡ ಹೊಸ ಮಾಲೀಕ ಬಂದು ಹಸುವನ್ನು ಟ್ರಕ್ ನಲ್ಲಿ ಸಾಗಿಸೋದಕ್ಕೆ ಮುಂದಾಗಿದ್ದಾನೆ. ಇದನ್ನು ಕಂಡ ಮಂಜಮಲಿಗೆ ಸಹಿಸೋದಕ್ಕೆ ಸಾಧ್ಯವಾಗಿಲ್ಲ.
ಟ್ರಕ್ ನಲ್ಲಿ ಲಕ್ಷ್ಮೀಯನ್ನು ನೋಡಿದ್ದೇ ತಡ, ಓಡಿ ಬಂದು ಟ್ರಕ್ ಗೆ ಅಡ್ಡ ನಿಂತಿದೆ ಮಂಜುಮಲಿ. ಇದರಿಂದಾಗಿ ಸುಮಾರು ಒಂದು ಗಂಟೆಯ ತನಕ ರೋಡ್ ಬ್ಲಾಕ್ ಆಗಿತ್ತು. ಕೊನೆಗೆ ಹೇಗೋ ದಾರಿ ಮಾಡಿಕೊಂಡು ಟ್ರಕ್ ಮುಂದೆ ಸಾಗಿತು. ಆದರೆ ಮಂಜುಮಲಿ ಅಷ್ಟಕ್ಕೆ ಸುಮ್ಮನಾಗಿಲ್ಲ. ಸುಮಾರು ಒಂದು ಕಿಲೋ ಮೀಟರ್ ಟ್ರಕ್ ಹಿಂದೆಯೇ ಓಡಿದೆ. ಕೊನೆಗೆ ಸುಸ್ತಾಗಿ ನನ್ನಿಂದ ಸಾಧ್ಯ ಇಲ್ಲ ಅಂತಾ ಅಸಹಾಯಕನಾಗಿ ಗೂಳಿ ಓಡೋದನ್ನು ನಿಲ್ಲಿಸಿದೆ. ಮಂಜುಮಲಿಯ ಈ ಮೂಕ ರೋಧನೆಯನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು. ಇದು ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಇದು ತಮಿಳುನಾಡಿನ ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರ ಮಗ ಓ.ಪಿ. ಜಯಪ್ರದೀಪ್ ಅವರ ಗಮನಕ್ಕೆ ಬಂದಿದೆ. ಜಯಪ್ರದೀಪ್ ಅವರು ಕೂಡಲೇ ಹಸು ಖರೀದಿ ಮಾಡಿದವರನ್ನು ಪತ್ತೆ ಹಚ್ಚಿ, ಅವರಿಗೆ ಹಣಕೊಟ್ಟು ಆ ಹಸುವನ್ನು ಮತ್ತೆ ಖರೀದಿ ಮಾಡಿದ್ದಾರೆ. ಬಳಿಕ ಹಸು ಎಲ್ಲಿತ್ತೋ ಅಲ್ಲೇ ಬಿಟ್ಟು ಬಂದಿದ್ದಾರೆ. ಆ ಮೂಲಕ ಮಂಜುಮಲಿ ಹಾಗೂ ಲಕ್ಷ್ಮೀಯನ್ನು ಒಂದು ಮಾಡಿ, ಪ್ರೇಮಿಗಳ ಪಾಲಿಗೆ ದೇವರಾಗಿದ್ದಾರೆ ಜಯಪ್ರದೀಪ್.