ಕಾಸರಗೋಡು : ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಮಂತ್ರವಾದ ಹಾಗೂ ವಾಮಾಚಾರ ಮೂಲಕ ಗುಣಪಡಿಸಲು ಯತ್ನಿಸಿದ ಘಟನೆ ಕೇರಳದಲ್ಲಿ ನಡೆದಿದೆ.
ಕಣ್ಣೂರು ಜಿಲ್ಲೆಯ ಅಬ್ದುಲ್ ಸತ್ತಾರ್ ಹಾಗೂ ಸಾಬಿಯ ದಂಪತಿಯ ಪುತ್ರಿ, ಫಾತಿಮಾ (11) ಮೃತಪಟ್ಟ ಬಾಲಕಿ. ಜ್ವರದಿಂದ ಬಳಲುತಿದ್ದ ಈ 11 ವರ್ಷದ ಬಾಲಕಿ 3 ದಿನ ಮಂತ್ರವಾದಿಯ ಕಾಟದಿಂದ ನರಳಿ ಮೃತಪಟ್ಟ ಬಗ್ಗೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈಕೆಯ ತಂದೆ ಹಾಗೂ ಈಕೆಯ ಮೇಲೆ ಮಂತ್ರವಾದ ಪ್ರಯೋಗಿಸಿದಾತ ಇಮಾಂ ಕುಂಞಪಳ್ಳಿ ನಿವಾಸಿ ಉವೈಸ್ ಬಂಧಿತ ಆರೋಪಿಗಳು.
ಒಂದಷ್ಟು ದಿನಗಳ ಹಿಂದೆ ಫಾತಿಮಳಿಗೆ ಜ್ವರ ಕಾಣಿಸಿಕೊಂಡಿತ್ತು. ಆಕೆಯ ತಂದೆ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಬದಲು ಬಾಲಕಿಯನ್ನು ಆರೋಪಿ ಇಮಾಮ್ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿ 3 ದಿನಗಳ ಕಾಲ ಬಾಲಕಿಗೆ ಚಿಕಿತ್ಸೆ ನೀಡದೆ ವಾಮಾಚಾರ, ಮಂತ್ರವಾದ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಚಿಕಿತ್ಸೆ ಎಂದು ಹೇಳಿಕೊಂಡು ಬಾಲಕಿಯೊಂದಿಗೆ ನಡೆಸಿದ ವಾಮಾಚಾರ ಮತ್ತು ದೈಹಿಕ ದೌರ್ಜನ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಬಾಲಕಿಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ತಂದೆ ಹಾಗೂ ಇಮಾಮ್ ರನ್ನು ಬಂಧಿಸಿದ್ದಾರೆ. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಈ ಕುಟುಂಬದಲ್ಲಿ ಈ ಹಿಂದೆ ನಡೆದ 3 ಅಸಹಜ ಸಾವಿಗೂ ಇದೇ ಇಮಾಂನ ಮಂತ್ರವಾದವೇ ಕಾರಣ ಎನ್ನುವ ಅನುಮಾನ ವ್ಯಕ್ತವಾಗಿದೆ.
ಕಣ್ಣೊರಿನ ಸಿಟಿ ಆಜಾದ್ ರಸ್ತೆಯಲ್ಲಿರುವ ಪಡಿಕ್ಕಲ್ ಸಫಿಯಾ (70) ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಗೆ ಇದೆ ಮಂತ್ರವಾದಿಯನ್ನು ಅವಲಂಬಿಸಿದ್ದಳೆನ್ನಲಾಗಿದೆ. ಆಕೆಯ ಪುತ್ರ ಅಶ್ರಫ್, ಸಹೋದರಿ ನಫೀಸು ಅವರ ಸಾವಿಗೂ ಇದೆ ಮಂತ್ರವಾದಿ ಕಾರಣ ಎಂದು ಸಫಿಯಾರ ಪುತ್ರ ಆರೋಪಿಸಿರುವುದಾಗಿ ವರದಿಯಾಗಿದೆ. ಕುರುವ ನಿವಾಸಿಯಾದ ಇಂಚಿಕಲ್ ಅನ್ವರ್ ಸಾವಿಗೂ ವಾಮಾಚಾರವೇ ಕಾರಣವೆನ್ನಲಾಗಿದೆ.
ಫಾತಿಮಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆಯ ವ್ಯಾಪ್ತಿಯನ್ನು ಹಿಗ್ಗಿಸಿ ಈ ಕುಟುಂಬದಲ್ಲಿ ಈ ಹಿಂದೆ ನಡೆದ 3 ಅಸಹಜ ಸಾವಿನ ಕುರಿತು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.