ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮೊಸಳೆಯ ಸಾವಿಗೆ ಕಾರಣ ಬಹಿರಂಗವಾಗಿದೆ. ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್ ಕಾರಣ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.ಪ್ಲಾಸ್ಟಿಕ್ನಲ್ಲಿದ್ದ ತ್ಯಾಜ್ಯ ಅಜೀರ್ಣ ವಾದದ್ದು ಮೊಸಳೆಯ ಸಾವಿಗೆ ಕಾರಣವಾಯಿತೇ ಅಥವಾ ಪ್ಲಾಸ್ಟಿಕ್ ಕಾರಣವಾಯಿತೇ ಎಂಬುದು ಇನ್ನಷ್ಟು ತನಿಖೆಯಿಂದ ಹೊರಬರಬೇಕಿದೆ. ಇದು ಆತಂಕಕಾರಿ ಯಾಗಿದ್ದು, ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸೇವನೆಯಿಂದ ಮೊಸಳೆ ಸತ್ತ ಪ್ರಕರಣ ಇದು ಮೊದಲನೆಯದಾಗಿದೆ.
ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರಾ ಹೊಳೆಯ ಕೊಡಿಂಬಾಳ ಗ್ರಾಮದ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಮೊಸಳೆಯ ಮೃತದೇಹ ಪತ್ತೆಯಾಗಿತ್ತು.
ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ಕಡಬದ ಪಶುವೈದ್ಯಾಧಿಕಾರಿ ಡಾ| ಅಜಿತ್ ನಡೆಸಿದರು. ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ಮತ್ತಿತರ ತ್ಯಾಜ್ಯ ಕೆ.ಜಿ.ಗೂ ಅಧಿಕ ಪ್ರಮಾಣದಲ್ಲಿ ಪತ್ತೆಯಾಗಿದೆ. ಅದು ಜೀರ್ಣಗೊಳ್ಳದೆ ಅಸೌಖ್ಯದಿಂದ ಮೊಸಳೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಸುಮಾರು ಅಂದಾಜು 3-4 ವರ್ಷದ ಹೆಣ್ಣು ಮೊಸಳೆ ಇದಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಏನೆಕಲ್ಲಿನ ನರ್ಸರಿ ಪ್ರದೇಶದಲ್ಲಿ ಅಂತಿಮ ಪ್ರಕ್ರಿಯೆ ನಡೆಸಲಾಯಿತು. ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್, ಉಪ ವಲಯಾರಣ್ಯಾಧಿಕಾರಿಗಳಾದ ಸುಬ್ರಹ್ಮಣ್ಯ, ಅಜಿತ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿ ಮಹಜರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.