ಮಧ್ಯಪ್ರದೇಶ: ನದಿ ದಡದಲ್ಲಿ ಆಟವಾಡುತ್ತಿದ್ದ 10 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ, ತಿಂದಿದೆ. ಮೊಸಳೆ ಹೊಟ್ಟೆಯಲ್ಲಿ ಬಾಲಕ ಜೀವಂತವಾಗಿದ್ದಾನೆಂದು ಮೊಸಳೆಯನ್ನು ಗ್ರಾಮಸ್ಥರು ಕಟ್ಟಿ ಹಾಕಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್ ನ ರಿಜೆಂತಾ ಗ್ರಾಮದ ನಿವಾಸಿ ಅತಾರ್ ಸಿಂಗ್ ಎಂಬ 10 ವರ್ಷದ ಬಾಲಕ ಮರಳಿನ ಮೇಲೆ ಆಟವಾಡುತ್ತಿದ್ದ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ನದಿಯಿಂದ ಹೊರಬಂದ ಮೊಸಳೆ ಮಗುವಿನ ಮೇಲೆ ದಾಳಿ ಮಾಡಿದೆ. ಮೊಸಳೆ ಮಗುವಿನ ಮೇಲೆ ದಾಳಿ ಮಾಡುತ್ತಿದ್ದುದನ್ನು ಕಂಡ ಅಕ್ಕಪಕ್ಕದಲ್ಲಿ ನಿಂತಿದ್ದ ಗ್ರಾಮಸ್ಥರು ತಡ ಮಾಡದೇ ಸ್ಥಳಕ್ಕೆ ಧಾವಿಸಿ ನಂತರ ಮೊಸಳೆ ಹಿಡಿದು ಹಗ್ಗದಿಂದ ಬಿಗಿದಿದ್ದಾರೆ.
ಮೊಸಳೆ ಹೊಟ್ಟೆಯಲ್ಲಿ ಮಗುವಿದೆ, ಅದು ಬದುಕಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಘಟನೆಯ ನಂತರ ಮೊಸಳೆ ನುಂಗಿದ ಮಗುವಿಗೆ ಆಮ್ಲಜನಕ ಸಿಗಲಿ ಎಂದು ಗ್ರಾಮಸ್ಥರು ಮೊಸಳೆ ಬಾಯಿಗೆ ಕಟ್ಟಿಗೆಯನ್ನೂ ಹಾಕಿದ್ದರು.
ಗಂಟೆಗಟ್ಟಲೆ ಶ್ರಮಿಸಿದ ಅರಣ್ಯ ಸಿಬ್ಬಂದಿ ಮೊಸಳೆಯನ್ನು ಗ್ರಾಮಸ್ಥರಿಂದ ಮುಕ್ತಗೊಳಿಸಿ ಚಂಬಲ್ ನದಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಇದಾದ ಬಳಿಕ ಮಂಗಳವಾರ ಬೆಳಗ್ಗೆ ಮಗುವಿನ ಶವ ನದಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಮಗುವಿನ ದೇಹದ ಮೇಲೂ ಗಾಯದ ಗುರುತುಗಳಿದ್ದು, ಸಾವು ಹೇಗೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.