ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ತಡೆಗೂ ಲಸಿಕೆ ಒಂದೇ ಉಪಾಯ. ಅದನ್ನು ವಿಳಂಬ ಮಾಡದೇ ಪಡೆಯಿರಿ ಎಂದು ಎಂದು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ. ಕೆ. ಸುಧಾಕರ್ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ಜುಲೈ ಪ್ರಾರಂಭವಾಗಿ ಸೆಪ್ಟೆಂಬರ್ ವರೆಗೆ ನಾಲ್ಕನೇ ಅಲೆ ಇರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ಅದನ್ನು ಎದುರಿಸಿ ನಿಯಂತ್ರಿಸಲು ಕರ್ನಾಟಕ ಸಿದ್ಧವಾಗಿದೆ ಆತಂಕ ಪಡುವ ಸಂದರ್ಭ ಬಂದಿಲ್ಲ. 8 ದೇಶಗಳಲ್ಲಿ ಹೆಚ್ಚು ಪರಿಣಾಮ ಕಾಣಿಸುತ್ತಿದ್ದು, ಅಲ್ಲಿಂದ ಬಂದವರಿಗೆ ತಪಾಸಣೆ ಮಾಡಲಾಗುತ್ತಿದೆ ಎಂದರು.
ಮಾಸ್ಕ್ ಹಾಕುವುದು ಅತ್ಯಗತ್ಯ. ಅದರಲ್ಲಿ ಸಡಿಲಿಕೆ ಇಲ್ಲ ಎಂದ ಅವರು, ನಾಲ್ಕನೇ ಅಲೆಗೆ ಹೆದರಬೇಕಿಲ್ಲ. 6 ರಿಂದ 12 ವರ್ಷದ 5 ಸಾವಿರ ಮಕ್ಕಳಿಗೆ ಲಸಿಕೆ ಕೊಟ್ಟಿಲ್ಲ. ಅವರ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಇವತ್ತು ಕೋವಿಶೀಲ್ಡ್ ವ್ಯಾಕ್ಸಿನ್ ಸೇರಿ ಒಟ್ಟು 10 ಲಸಿಕೆಗಳ ಉತ್ಪಾದನೆ ಆಗುತ್ತಿದ್ದು, ಲಭ್ಯವಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಲಾಗುತ್ತಿದೆ. ಡಿಎನ್ಎ್ ವ್ಯಾಕ್ಸಿನ್ ನಮ್ಮಲ್ಲಿ ಮಾತ್ರ ಲಭ್ಯವಿದೆ. ವಿವಿಧ ಕಂಪನಿಗಳ ಲಸಿಕೆಗಳ ಉತ್ಪಾದನೆ ನಡೆದಿದೆ ಎಂದು ತಿಳಿಸಿದರು. ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್.ಆರ್.ರಮೇಶ್ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.