ಮಂಗಳೂರು: ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದೇ ಇರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಛೇರಿ ಜಪ್ತಿಗೆ ನ್ಯಾಯಾಲಯ ಆದೇಶಿಸಿದೆ.
ಬಸ್ ನಿಲ್ದಾಣ ನಿರ್ಮಾಣ ಮಾಡಲು ಸುಮಾರು ಏಳು ಎಕರೆ ಭೂಮಿಯನ್ನು 2008 ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ನಿಗದಿ ಮಾಡಿದ್ದ ಪರಿಹಾರದ ಬಗ್ಗೆ ಆಕ್ಷೇಪ ಎತ್ತಿದ್ದ ಭೂಮಿ ಕಳೆದುಕೊಂಡ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದರು.
ಹೀಗಾಗಿ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ನ್ಯಾಯಾಲಯದಿಂದ ಮಂಗಳೂರು ಮಹಾನಗರ ಪಾಲಿಕೆಗೆ ಆದೇಶ ನೀಡಲಾಗಿತ್ತು. ಆದರೆ 2018 ರಲ್ಲಿ ಆದೇಶ ನೀಡಿದ್ದರೂ ಮಹಾನಗರ ಪಾಲಿಕೆ ಪರಿಹಾರ ಪಾವತಿಸದ ಕಾರಣ ಪಾಲಿಕೆ ಆಯುಕ್ತರ ಕಚೇರಿ ಜಪ್ತಿಗೆ ಕೋರ್ಟ್ ಆದೇಶ ನೀಡಿದೆ.ನ್ಯಾಯಾಲಯದ ಸಿಬ್ಬಂದಿಗಳಿಂದ ಪಾಲಿಕೆ ಆಯುಕ್ತರ ಕಚೇರಿ ಜಪ್ತಿ ಪ್ರಕ್ರಿಯೆ ನಡೆದಿದ್ದು, ಪುರುಷೋತ್ತಮ್ ಎಂಬ ಅರ್ಜಿದಾರರ ಪರವಾಗಿ ತೀರ್ಪು ಬಂದಿತ್ತು. ಮಂಗಳೂರು ನಗರದ ಪಂಪ್ ವೆಲ್ ಬಳಿ ಬಸ್ ನಿಲ್ದಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ನಡೆದಿತ್ತು.