Friday, June 5, 2026
Homeಕರಾವಳಿಮಂಗಳೂರು: ಚಿರತೆ ಪತ್ತೆಗಾಗಿ ಮುಂದುವರಿದ ಕಾರ್ಯಾಚರಣೆ!

ಮಂಗಳೂರು: ಚಿರತೆ ಪತ್ತೆಗಾಗಿ ಮುಂದುವರಿದ ಕಾರ್ಯಾಚರಣೆ!

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ಮರೋಳಿ ಜಯನಗರದಲ್ಲಿ ಭಾನುವಾರ ಸಂಜೆ ಪತ್ತೆಯಾಗಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆಹಿಡಿಯಲು, ಅರಣ್ಯ ಅಧಿಕಾರಿಗಳು ಕೂಂಬಿಂಗ್ (ಕಾರ್ಯಾಚರಣೆ) ಮುಂದುವರಿಸಿದ್ದು, ಬೋನು ಇಟ್ಟು ಸೆರೆಗೆ ಪ್ರಯತ್ನಿಸಿದ್ದಾರೆ.

ಆ ಭಾಗದಲ್ಲಿ ಕ್ಯಾಮೆರಾ ಟ್ರ್ಯಾಪ್ ಮತ್ತು ಬೋನು ಅಳವಡಿಸಿದೆ. ಸ್ಥಳೀಯರು ಹೇಳುವಂತೆ ಚಿರತೆ ಕತ್ತಲಾದ ಮೇಲೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ, ಸಂಜೆಯಾದ ಮೇಲೆ ಮನೆಯಿಂದ ಹೊರ ಹೋಗದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗಿದೆ. ಸ್ಥಳೀಯರ ಮನೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಫೂಟೇಜ್‌ಗಳನ್ನು ಪರಿಶೀಲಿಸಲಾಗಿದ್ದು, ಸೋಮವಾರ ಚಿರತೆ ಕಾಣಿಸಿಕೊಂಡಿಲ್ಲ.

ಭಾನುವಾರ ಸಂಜೆ 6:30ರ ವೇಳೆಗೆ ಜಯನಗರ 4ನೇ ಕ್ರಾಸ್‌ನಲ್ಲಿ ಚಿರತೆ ಹೋಲುವ ಪ್ರಾಣಿ ಪತ್ತೆಯಾಗಿದ್ದು, ಇದನ್ನು ನಿಧಿ ಶೆಟ್ಟಿ ಎಂಬ ಬಾಲಕಿ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ರಾತ್ರಿಯಾದ ಕಾರಣ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಸೋಮವಾರ ಈ ವ್ಯಾಪ್ತಿಯಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ನೇತೃತ್ವದ ತಂಡ ಆಗಮಿಸಿ ಶೋಧ ನಡೆಸಿದಾಗ, ಹೆಜ್ಜೆ ಗುರುತು ಆಧಾರದಲ್ಲಿ ಆ ಪ್ರಾಣಿ ಚಿರತೆಯೇ ಎಂದು ಖಚಿತಪಡಿಸಿದ್ದರು. ಆ ಬಳಿಕ ದಿನವಿಡೀ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

ಮಂಗಳವಾರ ಬೆಳಗ್ಗೆ ಇಲಾಖೆಯ 15 ಅಧಿಕಾರಿಗಳು ಮತ್ತೆ ಜಯನಗರ ಪರಿಸರದಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಕಂಕನಾಡಿಯ ಕನಪದವು, ಮಾರ್ತಕಂಪೌಂಡ್, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅದೇ ಸ್ಥಳದಲ್ಲಿ ಬೋನು ಅಳವಡಿಸಲಾಗಿದ್ದು ಕಾರ್ಯಾಚರಣೆ ಮುಂದುವರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ವಲಯ ಅರಣ್ಯಾಧಿಕಾರಿ ಸಂಜಯ್ ಪೈ, ಉಪವಲಯ ಅರಣ್ಯಾಧಿಕಾರಿ ಸಂಜಯ್, ಅರಣ್ಯ ರಕ್ಷಕರಾದ ವೀಣಾ, ಸೋಮಲಿಂಗ ಹಿಪ್ಪರಗಿ, ಶಿವು, ಉರಗ ರಕ್ಷಕ ಅತುಲ್ ಪೈ ಭಾಗವಹಿಸಿದ್ದರು.

- Advertisement -

Latest News

error: Content is protected !!