ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಕ್ ಖರ್ಗೆ ಕುರಿತಾಗಿ ಕಾನ್ವೆಂಟ್ ದಲಿತ ಎಂಬ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಮಾಧ್ಯಮ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಸಚಿವ ಸುನಿಲ್ ಕುಮಾರ್ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ, ಕಾನ್ವೆಂಟ್ ದಲಿತ ಅಂತ ನನ್ನ ಬಗ್ಗೆ ಹೇಳಿದ್ದಾರೆ, ಆದರೆ ನಾನು ಓದಿದ್ದು ಕಾನ್ವೆಂಟ್ ನಲ್ಲಿ ಅಲ್ಲ, ಬೆಂಗಳೂರಿನಲ್ಲಿರುವ ಉಡುಪಿಯ ಅದಮಾರು ಮಠದ ಶಾಲೆಯಲ್ಲಿ ಎಂದು ಹೇಳಿದ್ದಾರೆ.
ವೈಯಕ್ತಿಕ ಟೀಕೆ ಮಾಡುವುದು ನಿಮ್ಮ ಸ್ಟ್ರಾಟಜಿ ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ನೀವು ಎಷ್ಟೇ ವೈಯಕ್ತಿಕ ಟೀಕೆ ಮಾಡಿದರೂ ನಾನು ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಸಚಿವ ಸುನಿಲ್ ಕುಮಾರ್ ಗೆ ಸವಾಲು ಹಾಕಿದ್ದಾರೆ.
ನಾರಾಯಣ ಗುರು ಸ್ತಬ್ದ ಚಿತ್ರ ನಿರ್ಬಂಧ ಮಾಡಿದಾಗ ಸುನಿಲ್ ಕುಮಾರ್ ಯಾಕೆ ಸುಮ್ಮನಿದ್ರಿ ಎಂದು ಪ್ರಶ್ನೆ ಮಾಡಿರುವ ಖರ್ಗೆ, ನಾರಾಯಣ ಗುರುಗೆ ಅವಮಾನ ಮಾಡಿ ಪಾಠ ಕೈ ಬಿಟ್ಟಿದ್ದೀರಲ್ಲಾ ಈಗ ಯಾಕೆ ಮಾತಾಡ್ತಿಲ್ಲ ಎಂದು ಕೇಳಿದ್ದಾರೆ.
ಅಲ್ಲದೇ ಮೋದಿ ಬಗ್ಗೆ ಹೊಗಳುವಾಗ ಒಳ್ಳೊಳ್ಳೆಯ ಶಬ್ದ ಬರುತ್ತದೆ ಎಂದಿರುವ ಪ್ರಿಯಾಂಕ್ ಖರ್ಗೆ, ನಾರಾಯಣ ಗುರು ಅವರಿಗೆ ಅವಮಾನ ಆದಾಗ ತುಟಿಗೆ ಹೊಲಿಗೆ ಹಾಕಿರ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.