ಮಂಗಳೂರು: ಯುವಕರಿಗೆ ಆದ್ಯತೆ ನೀಡುವ ಕಾರಣ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಮಂಗಳೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗಿನ್ನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆಲ್ಲಬೇಕೆಂದರೆ ಯುವಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ನಮ್ಮ ರಾಜಕಾರಣಿಗಳು ಇದನ್ನು ಮರೆತಿರುವುದರಿಂದಲೇ ಕಾಂಗ್ರೆಸ್ಗೆ ಭಾರೀ ಏಟು ಬಿದ್ದಿದೆ. ಆದ್ದರಿಂದ ದೇಶದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ನಾವು ಈ ರೀತಿಯ ಪ್ರಯತ್ನ ಮಾಡಬೇಕು ಎಂದರು.
ಕಳೆದ ಚುನಾವಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಬಿಜೆಪಿಗರು ಯುವಕರಿಗೆ ಸ್ಥಾನ ನೀಡಿರುವುದರಿಂದ ಹೆಚ್ಚಿನ ಕಡೆಗಳಲ್ಲಿ ಗೆಲ್ಲಲು ಸಾಧ್ಯವಾಯಿತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ನಾನು ಯುವಕರಿಗೆ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದ್ದೆ. ಆದರೂ ನಾನು ಸ್ಪರ್ಧಿಸಬೇಕಾಯಿತು. ಕೊನೆಗೆ ಸೋಲಬೇಕಾಯಿತು. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಯುವಕರಿಗೆ ಸ್ಥಾನ ನೀಡುವುದು ಇಂದಿನ ರಾಜಕೀಯದ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಾನು ಈಗಾಗಲೇ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸ್ವಯಂ ಆಗಿ ನಿರ್ಧರಿಸಿ, ಯುವಕರಿಗೆ ಸ್ಥಾನ ನೀಡಿ ಗೆಲ್ಲಿಸಲು ನಾನು ನಿರ್ಧರಿಸಿದ್ದೇನೆ ಎಂದರು.