ಬೆಂಗಳೂರು: ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಯಾವುದೇ ಹುದ್ದೆಗೆ ಹೋಗಬಹುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೆಸರು ಕೇಳಿ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ರಾಷ್ಟ್ರಪತಿಯಾಗಿ ಒಬ್ಬ ಆದಿವಾಸಿ ಮಹಿಳೆಯನ್ನು ಮಾಡಲಾಗಿದೆ, ಇದನ್ನು ನೋಡಿದರೆ ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನು ಟೀಕಿಸಿದ ಸಚಿವ ಸುನೀಲ್ ಕುಮಾರ್, ನಾವು ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ, ಕಾಂಗ್ರೆಸ್ ಸಂವಿಧಾನಕ್ಕೆ, ಕಾನೂನಿಗೆ ಬೆಲೆ ಕೊಡಲ್ಲ ಭಯ ಇಲ್ಲ ಅಂದ್ರೆ ಯಾಕೆ ವಿಚಾರಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನಾವು ಇವರೆಲ್ಲರಿಂದಾಗಿ ಆಸ್ತಿ ಮಾಡಿದ್ದೇವೆ ಅಂತ ರಮೇಶ್ ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿರುವ ಸುನೀಲ್ ಕುಮಾರ್, ಒಂದು ಕಡೆ ಭ್ರಷ್ಟಾಚಾರ ಮಾಡಿ ಬಹಿರಂಗ ಒಪ್ಪಿಕೊಳ್ಳುತ್ತಾರೆ, ಇನ್ನೊಂದು ಕಡೆ ಪ್ರತಿಭಟನೆ ಮಾಡುತ್ತಾರೆ, ಹಾಗಾಗಿ ಕಾಂಗ್ರೆಸ್ ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.