ಮಂಗಳೂರು: ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ರೌಡಿಗಳ ಕಾಳಗ ಹೆಚ್ಚಾಗುತ್ತಿದೆ. ವಾರಕ್ಕೊಂದರಂತೆ ಜಿಲ್ಲೆಯಲ್ಲಿ ಇದೀಗ ರೌಡಿ ಕಾಳಗದಿಂದಾಗಿ ಹೆಣಗಳು ಉರುಳಲಾರಂಭಿಸಿವೆ. ಎರಡು ವಾರದ ಹಿಂದೆ ಉಡುಪಿ ಜಿಲ್ಲೆಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆ ಹತ್ಯೆಯ ಬಳಿಕ ಈ ಕೊಲೆಗೆ ಪ್ರತೀಕಾರವಾಗಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಂದು ಹತ್ಯೆಯಾಗಿದೆ. ತುಳು ಚಿತ್ರರಂಗದ ನಟ ಸುರೇಂದ್ರ ಬಂಟ್ವಾಳ್ನನ್ನು ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಹತ್ಯೆ ಮಾಡಲಾಗಿದೆ.
ಈ ನಡುವೆ ಗಾಂಜಾ ಹಾಗೂ ಇತರ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಎರಡು ಗುಂಪುಗಳ ನಡುವೆ ವೈಷ್ಯಮ್ಯ ರೌಡಿಶೀಟರ್ ಓರ್ವನ ಕೊಲೆಯಲ್ಲಿ ಆರಂಭಗೊಂಡಿದೆ. ಕಲ್ಲಡ್ಕ ಹಾಗೂ ಇತರ ಭಾಗಗಳಲ್ಲಿ ಕೊಲೆಯತ್ನ, ದರೋಡೆ ಮೊದಲಾದ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಚೆನ್ನೆ ಫಾರೂಕ್ ಎಂಬ ರೌಡಿಶೀಟರ್ನನ್ನು ಆತನ ಜೊತೆಗೇ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಇಬ್ರಾಹಿಂ ಖಲೀಲ್ ಎಂಬಾತನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಪ್ರತೀಕಾರವಾಗಿ ಜಿಲ್ಲೆಯಲ್ಲಿ ಮತ್ತೆ ಹಲವು ಹತ್ಯೆಗಳು ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರಲಾಂಭಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ರೌಡಿಗಳನ್ನು ಮಟ್ಟ ಹಾಕಲು ಮತ್ತೆ ಸಜ್ಜಾಗಿದೆ.
ಜಿಲ್ಲೆಯಲ್ಲಿ ರೌಡಿಶೀಟರ್ ಗಳ ಮೇಲೆ ನಿಗಾಯಿಡುವ ಕೆಲಸವನ್ನು ಪೋಲೀಸ್ ಇಲಾಖೆ ಆರಂಭಿಸಿದ್ದು, ಯಾವುದೇ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಪುಡಿ ರೌಡಿಗಳ ಪಟ್ಟಿಯನ್ನು ಈಗಾಗಲೇ ಪೋಲೀಸ್ ಇಲಾಖೆ ಸಿದ್ಧಪಡಿಸಿದೆ. ಸುಮಾರು ನೂರಕ್ಕೂ ಮಿಕ್ಕಿದ ರೌಡಿಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಪೋಲೀಸ್ ಇಲಾಖೆ ಈ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವರದಿಯನ್ನು ಸರಕಾರಕ್ಕೆ ಶೀಘ್ರವೇ ಮಂಡಿಸಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ B.M ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯು ಕೇರಳದ ಗಡಿಯನ್ನು ಹಂಚಿಕೊಂಡಿದ್ದು, ಕೇರಳ ರಾಜ್ಯದ ನೊಟೋರಿಯಸ್ ಕ್ರಿಮಿನಲ್ಗಳೂ ಜಿಲ್ಲೆಯನ್ನು ಪ್ರವೇಶಿಸಿ ಅಪರಾಧಗಳನ್ನು ಎಸಗಿ ಪರಾರಿಯಾಗುತ್ತಿರುವ ಪ್ರಕರಣಗಳೂ ಸಾಕಷ್ಟು ಪತ್ತೆಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಅಪರಾಧ ಕೃತ್ಯಗಳಲ್ಲಿ ಕೇರಳದ ನಂಟೂ ಇರುವ ಕಾರಣ ಕೇರಳ ಗಡಿಭಾಗದಲ್ಲೂ ಕಟ್ಟುನಿಟ್ಟಿನ ನಿಗಾವಹಿಸಲು ಜಿಲ್ಲಾ ಪೋಲೀಸ್ ತೀರ್ಮಾನಿಸಿದೆ.
ಕರಾವಳಿಯಲ್ಲಿ ಹೆಚ್ಚಾಗ್ತಿದೆ ರೌಡಿಗಳ ಕಾಳಗ: ಗೂಂಡಾ ಕಾಯ್ದೆ ಹೇರಲು ಪೊಲೀಸರ ಸಿದ್ಧತೆ
- Advertisement -
- Advertisement -
- Advertisement -