ಕರಾವಳಿ ಭಾಗದಲ್ಲಿನ ಹತ್ಯೆ ಪ್ರಕರಣಗಳು ಬಹಳ ನೋವು ತರುವ ಸಂಗತಿ. ಇಂಥಾ ಘಟನೆಗಳು ಆಗಬಾರದು ಎಂದು ಹಾವೇರಿಯಲ್ಲಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಇಂಥಾ ಸಮಯದಲ್ಲಿ ಇಂಟಲಿಜೆನ್ಸಿಯವರು ಪೊಲೀಸರಿಗಿಂತ ಬಹಳ ಕೆಲಸ ಮಾಡಿ ಸರಕಾರಕ್ಕೆ ಮಾಹಿತಿ ಕೊಡಬೇಕು. ಇವೆಲ್ಲ ನಡೆಯಬಾರದು, ನಡೀತಿವೆ. ಯಾವುದೇ ಜಾತಿ ಇರಲಿ, ಏನೇ ಇರಲಿ ತಪ್ಪಿತಸ್ಥರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂಥದ್ದು ಮಾಡಿದವರಿಗೆ ಶಿಕ್ಷೆ ಆಗಿದ್ದು ಇವತ್ತಿನರವೆಗೂ ನನಗೆ ಗೊತ್ತಾಗಿಲ್ಲ. ಶಿಕ್ಷೆ ಆದರೆ ಮಾತ್ರ ಇಂಥಾ ಘಟನೆಗಳು ಕಡಿಮೆ ಆಗುತ್ತವೆ. ಅದಕ್ಕೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಅಂತಾ 20 ಕಾನೂನುಗಳಿವೆ. 10-15 ವರ್ಷ ಆಗೋದರಲ್ಲಿ ಜನರು ಅದನ್ನು ಮರೆತು ಬಿಡ್ತಾರೆ ಎಂದು ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೊರಟ್ಟಿ ಖೇದ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಮೊನ್ನೆ ಇಸ್ರೇಲ್ ಗೆ ಹೋಗಿದ್ದೆ. ಅಲ್ಲಿ ಬೆಳಗ್ಗೆ ಇಂಥಾ ಘಟನೆಯಾದರೆ ಸಂಜೆ ವೇಳೆಗೇ ಹ್ಯಾಂಗ್ ಮಾಡ್ತಾರೆ. ನಮ್ಮಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು. ಇಲ್ಲದಿದ್ದರೆ ಇನ್ನಷ್ಟು ಜಾಸ್ತಿ ಆಗುತ್ತವೆ ಎಂದು ಅವರು ಸೂಕ್ಷ್ಮವಾಗಿ ಹೇಳಿದರು.