ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿಯ ಕೆ.ಸಿ. ರೋಡ್ ಶಾಖೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದು, ಒಟ್ಟು ಆರು ಮಂದಿಯಲ್ಲಿ ನಾಲ್ಕು ಮಂದಿ ಬ್ಯಾಂಕ್ನೊಳಗೆ ಮತ್ತು ಇಬ್ಬರು ಬ್ಯಾಂಕ್ನ ಹೊರಗೆ ನಿಂತಿದ್ದರು ಎಂದಿದ್ದಾರೆ.
ಇನ್ನು ಟೋಲ್ ಗೇಟ್ ಸಿಬ್ಬಂದಿ ನೀಡಿದ ಮಾಹಿತಿಯಂತೆ, ದರೋಡೆ ನಡೆಸಲು ಬಳಸಿದ್ದ ಕಾರಿನೊಳಗೆ ಇಬ್ಬರು ಮಾತ್ರ ಟೋಲ್ಗೇಟ್ ದಾಟುವಾಗ ಇದ್ದರು ಎಂದು ತಿಳಿದು ಬಂದಿದೆ.
ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಾರಿನ ಮುಂದಿನ ಸೀಟಿನಲ್ಲಿ ಚಾಲಕ ಹೊರತುಪಡಿಸಿ ಬೇರೆ ಯಾರೂ ಕಂಡುಬಂದಿಲ್ಲ. ಹಿಂಬದಿಯ ಸೀಟಿನಲ್ಲಿ ಓರ್ವ ಅಥವಾ ಇಬ್ಬರು ಇದ್ದ ಸಾಧ್ಯತೆಯಿದ್ದು, ಟೋಲ್ನ ಮಹಿಳಾ ಸಿಬಂದಿಗೆ ಚಾಲಕ 150 ರೂ. ನೀಡಿ 40 ರೂ. ವಾಪಸ್ ಪಡೆದಿದ್ದ. ಆಗ ಚಾಲಕನ ಅರ್ಧ ಮುಖ ಸಿಸಿಟಿವಿಯಲ್ಲಿ ದಾಖಲಾಗಿದೆ.
ದರೋಡೆ ನಡೆಸಿದ ಬಳಿಕ ತಂಡ ಎರಡು ಭಾಗವಾಗಿ ಇನ್ನೊಂದು ವಾಹನದಲ್ಲಿ ಸಂಚರಿಸಿದ ಸಾಧ್ಯತೆ ಇದ್ದು, ಎರಡನೇ ತಂಡ ಚಿನ್ನಾಭರಣಗಳೊಂದಿಗೆ ಕರ್ನಾಟಕದ ಕಡೆ ಸಂಚರಿಸಿದೆಯೋ ಅಥವಾ ಕೇರಳ ಕಡೆ ಸಂಚರಿಸಿದೆಯೋ ಎಂಬ ಮಾಹಿತಿ ಲಭ್ಯವಾಗಬೇಕಿದೆ.ಇನ್ನು ಈ ಕುರಿತಂತೆ ಕೇರಳದಲ್ಲೂ ತನಿಖೆ ನಡೆಯುತ್ತಿದೆ