ಮೂಡಬಿದಿರೆ: ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಆಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ವೀಕ್ಷಿಸಲು ಭಾನುವಾರ ಮೂಡಬಿದಿರೆಗೆ ಆಗಮಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ಅವರ ವಿಶೇಷ ಕೋರಿಕೆಯನ್ನು ಮನ್ನಿಸಿ, ಒಂಟಿಕಟ್ಟೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಭೇಟಿ ನೀಡಿ ಕಂಬಳವನ್ನು ವೀಕ್ಷಿಸಿ ಖುಷಿಪಟ್ಟರು.
ಕಂಬಳ ಗ್ರಾಮೀಣ ಜನರ ಏಕತೆ ಮತ್ತು ಕರಾವಳಿಯ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಕಲೆ. ಸಿಂಹವನ್ನೂ ಬೆದರಿಸಬಲ್ಲ ಕೋಣಗಳನ್ನು ರೈತ ತನ್ನ ಬುದ್ಧಿವಂತಿಕೆಯಿಂದ ಪಳಗಿಸಿ ಕ್ರೀಡೆಗೆ ಬಳಸುತ್ತಿರುವುದು ವಿಶೇಷ. ಕಂಬಳ ಸೂರ್ಯ ಚಂದ್ರ ಇರುವಷ್ಟು ಕಾಲ ಉಳಿಯುವುದು ಖಂಡಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು.
ಕಾಂತಾರ ಸಿನೆಮಾದ ಬಂದ ಬಳಿಕ ಗ್ರಾಮೀಣ ಕ್ರೀಡೆ ಕಂಬಳವು ವಿಶ್ವಕ್ಕೆ ಪರಿಚಯವಾಗಿದೆ. ಭವಿಷ್ಯದಲ್ಲಿ ಕಂಬಳ ಭಾರತದ ಎಲ್ಲಾ ರಾಜ್ಯಗಳಲ್ಲೂ ವಿದೇಶಗಳಲ್ಲೂ ನಡೆಯುವಂತಾದರೆ ಅಚ್ಚರಿಯಲ್ಲ ಎಂದು ಹೇಳಿದರು. ವಾಜಪೇಯಿಗೆ ಪುಷ್ಪನಮನ ಮುಖ್ಯಮಂತ್ರಿಯವರು ವಾಜಪೇಯಿ ಅವರ ಹುಟ್ಟುದಿನದ ಪ್ರಯುಕ್ತ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.
ಕಂಬಳ ಸಮಿತಿ ಗೌರವ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಸಿಎಂಗೆ ಆಂಶಿಕವಾಗಿ ಬೆಳ್ಳಿ ಮಡಾಯಿಸಿದ ಕೆತ್ತನೆಯ ನೊಗ ಮತ್ತು ಕಂಬಳದ ಬೆತ್ತ ನೀಡಿ ಗೌರವಿಸಿದರು. ಬಿಜೆಪಿ ರಾ.ಪ್ರ. ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಸುನಿಲ್ ಕುಮಾರ್, ನಾಗೇಶ್,ನಾರಾಯಣ ಗೌಡ, ಕಂಬಳ ಸಮಿತಿ ಕೋಶಾಧಿ ಕಾರಿ ಭಾಸ್ಕರ ಕೋಟ್ಯಾನ್, ಪ್ರ. ಕಾರ್ಯ ದರ್ಶಿ ಗುಣಪಾಲ ಕಡಂಬ, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಮೊದಲಾದವರಿದ್ದರು.