ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ ಜನ ಮೃತಪಟ್ಟಾಗ ಸಿಎಂ ಸಿದ್ದರಾಮಯ್ಯ ಮೊಮ್ಮಗನೊಂದಿಗೆ ಹೋಟೆಲ್ ನಲ್ಲಿ ದೋಸೆ, ಬಾಸುಂದಿ ತಿನ್ನುತ್ತಾ ಕುಳಿತಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಯೊಬ್ಬರು ಅಪ್ಪಯ್ಯನ ಆತ್ಮೀಯರು ಎಂದು ಹೇಳಿದ್ದಾರೆ.
ಅಲ್ಲದೇ ಅಮಾನತು ಮಾಡಿದ್ದು ನಾಟಕವಾಗಿದ್ದು, ಬೇಜಾರು ಮಾಡಿಕೊಳ್ಳಬೇಡಿ ಎಂದು ಮೊದಲೇ ಹೇಳಿರುತ್ತಾರೆ ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, ವಿಜಯೋತ್ಸವ ಆಚರಣೆ ವೇಳೆ ಸರ್ಕಾರದ ಹಲವಾರು ಉದ್ಧಟತನದ ತೀರ್ಮಾನಗಳು ಆಗಿದ್ದು, ಕಾಂಗ್ರೆಸ್ ಹೈಕಮಾಂಡ್ ಗೆ ಮಾನ ಮರ್ಯಾದೆ ಇದ್ದರೆ ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ಹೊರ ಹಾಕಿ ಹೊಸಬರನ್ನು ತರುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಇದೇ ವೇಳೆ ಕಮಿಷನರ್ ದಯಾನಂದ್ ಸಸ್ಪೆಂಡ್ ಮಾಡಲೇಬೇಕು ಅಂತಾ ಕ್ಯಾಬಿನೆಟ್ ನಲ್ಲಿ ಟೇಬಲ್ ಗುದ್ದಿ ಹೇಳಿದವರು ಯಾರು ಎಂದು ಪ್ರಶ್ನಿಸಿರುವ ಹೆಚ್.ಡಿ. ಕುಮಾರಸ್ವಾಮಿ, ಗೃಹ ಸಚಿವರು ಒಂದು ರೀತಿ ಕೀಲು ಕುದುರೆ ಇದ್ದ ಹಾಗೆ ಎಂದು ವ್ಯಂಗ್ಯವಾಡಿದ್ದಾರೆ.


