ಚಿತ್ರದುರ್ಗ: ಎರಡು ವರ್ಷದ ಮಗುವಿಗೆ ದೆವ್ವ ಹಿಡಿದಿದೆ ಎಂಬುದಾಗಿ ದೇವರ ಮೊರೆಯನ್ನು ಹೋದಂತ ಪೋಷಕರಿಗೆ, ಶಾಕ್ ಕಾದಿತ್ತು. ದೆವ್ವ ಬಿಡಿಸುವ ನೆಪದಲ್ಲಿ 2 ವರ್ಷದ ಮಗುವಿಗೆ ಬೆತ್ತದಿಂದ ಹೊಡೆದ ಕಾರಣ, ಪುಟ್ಟ ಮಗು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಕೇಶ್ (19) ಎಂಬ ಮಂತ್ರವಾದಿ ಕಂದಮ್ಮನ ಬಲಿಪಡೆದ ಪಾಪಿ ಮಂತ್ರವಾದಿ.
ಅಜ್ಜಿ ಕ್ಯಾತನಹಳ್ಳಿ ಗ್ರಾಮದ ಪ್ರವೀಣ್ ಹಾಗೂ ಬೇಬಿ ದಂಪತಿಗಳ ಎರಡು ವರ್ಷದ ಪುತ್ರಿ ಪೂರ್ಣಿಕಾ ಪದೇ ಪದೇ ಬೆಚ್ಚಿ ಬೀಳುತ್ತಿದ್ದಳು. ಈ ಹಿನ್ನಲೆಯಲ್ಲಿ ಊರಿನ ಮಂತ್ರವಾದಿ ರಾಕೇಶ್ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಆ ಮಂತ್ರವಾದಿ ಮಗುವಿಗೆ ದೆವ್ವ ಹಿಡಿದಿದೆ ಎಂದು ಎಕ್ಕೆಗಿಡದ ಬೆತ್ತದಿಂದ ಹೊಡೆದಿದ್ದಾನೆ. ಪೂಜಾರಿಯ ಬೆತ್ತದ ನೋವಿಗೆ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ತಕ್ಷಣ ಪೋಷಕರಿಗೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಹೇಳಿ ಮಂತ್ರವಾದಿ ಪರಾರಿಯಾಗಿದ್ದಾನೆ. ಆದರೆ ಮಗು ಮೃತಪಟ್ಟಿರುವುದು ತಿಳಿಸ ಪೋಷಕರು ಮಂತ್ರವಾದಿಯ ವಿರುದ್ಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.