ಮಂಗಳೂರು : ಕೈಕಾಲು ತೊಳೆಯಲು ನದಿಗಿಳಿದ ಬಾಲಕ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ದುರ್ಮರಣಕ್ಕೀಡಾದ ಘಟನೆ ನಗರದ ಹೊರವಲಯದ ಬೋಳಿಯಾರು ಗ್ರಾಮದ ಜಾರದಗುಡೆ ತೋಟದಲ್ಲಿ ನಡೆದಿದೆ.
ಕೊಣಾಜೆ ಸಮೀಪದ ನಡುಪದವು ನಿವಾಸಿ ಫಾಝಿಲ್(15) ಮೃತ ಬಾಲಕ.
ಫಾಝಿಲ್ ಬೋಳಿಯಾರುವಿನ ಧರ್ಮನಗರ ಸಮೀಪದ ಜಲಕದಕಟ್ಟೆ ಎಂಬಲ್ಲಿ ತೋಟವೊಂದರ ಕೆಲಸಕ್ಕೆ ಸ್ನೇಹಿತರೊಂದಿಗೆ ತೆರಳಿದ್ದು, ಅಲ್ಲಿ ತೆಂಗಿನಕಾಯಿ ಹೆಕ್ಕಿದ ಬಳಿಕ ತೋಟದ ಪಕ್ಕವೇ ಹರಿಯುವ ನದಿ ಕಿನಾರೆಯ ಬಳಿ ತೆರಳಿ ಕೈಕಾಲು ತೊಳೆಯಲು ಇಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಉಳಿದಿಬ್ಬರು ಮಕ್ಕಳು ಬೊಬ್ಬೆ ಹೊಡೆದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಯುವಕರ ತಂಡ ದೋಣಿ ಮೂಲಕ ಸುಮಾರು 1 ಘಂಟೆ ಕಾಲ ನದಿಯಲ್ಲಿ ಜೀವದ ಹಂಗನ್ನು ತೊರೆದು ಹುಡುಕಾಡಿ ಶವವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಶೋಧ ಕಾರ್ಯದಲ್ಲಿ ಬದ್ರುದ್ದೀನ್ ಪಾನೆಲ, ಸಾಜಿದ್, ಸತ್ತಾರ್, ಶೆರೀಫ್ ಬೋಳಿಯಾರು, ಪೈಝಲ್, ನೌಶಾದ್, ನಾಸೀರ್, ಸಮದ್, ಅಕ್ರಂ ಇತರ ಯುವಕರು ಸಹಕರಿಸಿದರು. ಮೃತ ದೇಹವನ್ನು ಯೇನೆಪೋಯ ಅಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.