ಬೆಂಗಳೂರು: ಉಪ-ಚುನಾವಣೆ ಎದುರಾದಾಗ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ನನ್ನನ್ನು ಪರಿಗಣಿಸಿ, ನನಗೆ ಸರ್ಕಾರದಲ್ಲಿ ಅಥವಾ ಪಕ್ಷದಲ್ಲಿ ಒಂದು ಸ್ಥಾನ ಬೇಕೇ ಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ಅವರಿಗೆ ನಟಿ ರಾಗಿಣಿ ದ್ವಿವೇದಿ ಒತ್ತಾಯಿಸಿದ್ದಾರೆ.
ಬೆಳ್ಳಂಬೆಳಗ್ಗೆ ಸಿಎಂ ಯಡಿಯೂರಪ್ಪ ಅವರ ಖಾಸಗಿ ನಿವಾಸ ಕಾವೇರಿಗೆ ಭೇಟಿ ನೀಡಿದ ರಾಗಿಣಿ, ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೇವಲ ಸಿಎಂ ಯಡಿಯೂರಪ್ಪ ಮಾತ್ರವಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ರನ್ನು ಭೇಟಿಯಾಗಿ ಇದೇ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಆದರೆ ಇಬ್ಬರು ನಾಯಕರು ಮುಂದಿನ ದಿನಗಳಲ್ಲಿ ನಿಮಗೆ ಜವಾಬ್ದಾರಿ ನೀಡೋಣ ಎಂದಷ್ಟೇ ಹೇಳಿದ್ದಾರೆ ಅಂತಾ ತಿಳಿದುಬಂದಿದೆ.
ಕೊರೊನಾ ಹಿನ್ನೆಲೆಯಲ್ಲಿ ಪೋಲಿಸ್, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಜರ್, ಆಹಾರ ವಿತರಿಸುತ್ತಿದ್ದೇನೆ. ಕಷ್ಟದಲ್ಲಿರುವ ಜನರಿಗೂ ಸಹಾಯ ಮಾಡುತ್ತಿದ್ದೇನೆ. ನನ್ನ ಸಮಾಜ ಸೇವೆಯನ್ನ ತಿಳಿದು ಸಿಎಂ ತುಂಬಾ ಖುಷಿಪಟ್ಟರು. ನಿಮ್ಮ ಸೇವೆಯನ್ನು ಹೀಗೆ ಮುಂದುವರೆಸಿಕೊಂಡು ಹೋಗಿ.. ಸರ್ಕಾರದಿಂದ ಯಾವುದೇ ಸಹಾಯ ಬೇಕಾದರೂ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು.