ಚಿಕ್ಕಮಗಳೂರು: ತರೀಕೆರೆ ಠಾಣಾ ವ್ಯಾಪ್ತಿಯ ಬೆಟ್ಟದ ತಾವರೆಕೆರೆ ಗ್ರಾಮದ ವ್ಯಕ್ತಿಯೋರ್ವ ಕೊಬ್ಬರಿ ಎಣ್ಣೆ ಗಾಣಕ್ಕೆ ಕೊಡಲು ಮಗಳ ಜತೆಗೆ ಬಂದಿದ್ದು, ಈ ವೇಳೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಇದೀಗ ನಾಪತ್ತೆ ಪ್ರಕರಣವು ಮಗು ಸುರಕ್ಷಿತವಾಗಿ ಪೋಷಕರನ್ನು ಸೇದರುವ ಮುಖೇನ ಸುಖಾಂತ್ಯ ಕಂಡಿದೆ.
ಅ.25 ಶುಕ್ರವಾರದಂದು ಪ್ರಕಾಶ್ ಮತ್ತು ಮೇರಿ ದಂಪತಿಗಳು ಮಗುವನ್ನು ತರೀಕೆರೆ ಪೊಲೀಸ್ ಠಾಣೆ ತಂದು ಒಪ್ಪಿಸಿದ್ದಾರೆ.
ಪ್ರಕರಣದ ವಿವರ: ಕಡೂರು ತಾಲೂಕಿನ ಯಗಟಿ ಸಮೀಪದ ಸೀತಾಪುರ ಹಟ್ಟಿ ತಾಂಡ್ಯದ ರಘುನಾಯಕ್ ಹಾಗೂ ಮಗಳು ಮಾನಸ ಗುರುವಾರ (ಅ.24) ಕಡೂರು ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿನ ಕೊಬ್ಬರಿ ಎಣ್ಣೆ ಬಿಡಿಸುವ ಗಾಣದ ಬಂದಿದ್ದ ವೇಳೆ ಮಗು ನಾಪತ್ತೆಯಾಗಿದ್ದಳು. ಹುಡುಕಾಟ ನಡೆಸಿದ ರಘು ನಾಯಕ್ ಪಕ್ಕದ ಅಂಗಡಿ ಸಿಸಿ ಟಿವಿ ಪರಿಶೀಲಿಸಿದಾಗ ಮಹಿಳೆಯೊಬ್ಬರು ಮಗುವನ್ನು ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು.ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ರಘು ನಾಯಕ್ ಗಾಣದಿಂದ ಮಗಳನ್ನು ಮರೆತು ನೇರವಾಗಿ ಮದ್ಯಪಾನ ಮಾಡಲು ತೆರಳಿದ್ದು, ಈ ವೇಳೆ ಮಗು ಅಳುತ್ತಿರುವುದನ್ನು ಗಮನಿಸಿದ ತರೀಕೆರೆ ತಾಲೂಕು ಶಿವಪುರ ಸಮೀಪದ ಚಟ್ನಹಳ್ಳಿ ಗ್ರಾಮದ ಓಂಕಾರಪ್ಪ ಮತ್ತು ದಂಪತಿಗಳು ಮಗುವನ್ನು ಸಂತೈಸಿ ಪೋಷಕರು ಯಾರಾದರೂ ಬರಬಹುದು ಎಂದು ಅರ್ಧ ಗಂಟೆಗೂ ಹೆಚ್ಷು ಕಾಲ ಕಾದಿದ್ದಾರೆ. ಯಾರು ಬಾರದಿರುವ ಹಿನ್ನಲೆಯಲ್ಲಿ ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಗ್ರಾಮಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಮಗು ನಾಪತ್ತೆಯಾಗಿರುವ ಪ್ರಕರಣ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದ ಬೆಟ್ಟದ ತಾವರೆಕೆರೆ ಗ್ರಾಮದ ಪ್ರಕಾಶ ಮತ್ತು ಮೇರಿ ಮಗುವನ್ನು ತರೀಕೆರೆ ಠಾಣೆಗೆ ಮಗುವನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು ಕಾಣೆ ಪ್ರಕರಣ ಸುಖಾಂತ್ಯ ಕಂಡಿದೆ.