ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ಮೆಣಸೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಚಿಕ್ಕಮಗಳೂರು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದ್ದಾರೆ.
ಶಿಕ್ಷೆಗೆ ಒಳಗಾದವರು ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್. 6 ವರ್ಷದಿಂದ ಸುದೀರ್ಘ ವಿಚಾರಣೆ ನಡೆದ ಬಳಿಕ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 20 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
2015ರ ಏಪ್ರಿಲ್ 18ರಂದು ಶೃಂಗೇರಿ ತಾಲೂಕಿನ ಮೆಣಸೇ ಗ್ರಾಮ ವಾಸಿ, ಶೃಂಗೇರಿಯಲ್ಲಿ ಎಸ್ ಟಿಡಿ ಬೂತ್ ನಡೆಸುತ್ತಿದ್ದ ಗಣೇಶ್ ಅಲಿಯಾಸ್ ಗಣಿ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ಆಸಿಡ್ ಹಾಕುವ ಮೂಲಕ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿತ್ತು.ಆರೋಪಿ ಗಣೇಶ್ ಹಾಗೂ ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಸಂತ್ರಸ್ಥ ಮಹಿಳೆ ಒಂದೇ ಊರಿನವರಾಗಿದ್ದು ಸ್ನೇಹಿತರಾಗಿದ್ದರು.ಗಣೇಶ್ ತನ್ನನ್ನು ಮದುವೆಯಾಗುವಂತೆ ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದಿದ್ದನು.ಆದರೆ ಮಹಿಳೆ ಮದುವೆಗೆ ತಿರಸ್ಕರಿಸಿದ್ದರು.ಈ ಕಾರಣಕ್ಕೆ ಗಣೇಶ್ ಮೂವರೊಂದಿಗೆ ಸೇರಿ ಆಸಿಡ್ ದಾಳಿ ಸಂಚು ರೂಪಿಸಿದ ಎಂದು ಇವರ ಮೇಲೆ ಆರೋಪಿಸಲಾಗಿತ್ತು.
ಅಂದು ರಾತ್ರಿ ಸುಮಾರು 8.45ರ ಸಮಯ ದ್ವಿಚಕ್ರವಾಹನದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಆರೋಪಿಗಳು ವಿಳಾಸ ಕೇಳುವ ಸೋಗಿನಲ್ಲಿ ಮಹಿಳೆಯನ್ನು ಮಾತನಾಡಿಸಿ ಆಸಿಡ್ ಎರಚಿದರು ಎಂದು ಆರೋಪಿಸಲಾಗಿತ್ತು. ದಾಳಿಯಲ್ಲಿ ಬಲಗಣ್ಣು ಸುಟ್ಟು ಎಡಗಣ್ಣು ಭಾಗಶಃ ಹಾನಿಯಾಗಿತ್ತು ಮತ್ತು ಮೈ ಕೈ ಕಾಲು ಸಹ ಸುಟ್ಟಿತ್ತು. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಸುಧೀರ್ ಕುಮಾರ್ ಹೆಗಡೆ ಅವರು ಪ್ರಕರಣದ ತನಿಖೆ ನಡೆಸಿ ಕೋರ್ಟಿಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಈ ಕೇಸ್ ನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬಿ.ಎಸ್.ಮಮತಾ ಕಾರ್ಯ ನಿರ್ವಹಿಸಿದ್ದರು.