ಕೊಡಗು: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾಗಿ ಆರು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ನಡೆದಿದೆ.
ಮಡಿಕೇರಿ ಕಡೆಯಿಂದ ಗೋಣಿಕೊಪ್ಪದ ಕಡೆ ಸಾಗಿರುವ ಲಾರಿಯಿಂದ ದ್ರವ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ರಸ್ತೆಯುದ್ದಕ್ಕೂ ನೀರಿನಂತಿರುವ ರಾಸಾಯನಿಕ ಚೆಲ್ಲಿದೆ. ರಾಸಾಯನಿಕ ಸೋರಿಕೆಯಾದ ರಸ್ತೆ ಬದಿಯ ನಿವಾಸಿಗಳಿಗೆ ಕೆಮ್ಮು, ತುರಿಕೆ ಸೀನು ಕಾಣಿಸಿಕೊಂಡಿದೆ. 6 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ರಾಸಾಯನಿಕ ದ್ರವ ಸೋರಿಕೆಯಾಗಿರುವ ಲಾರಿಯನ್ನು ಮಾಕುಟ್ಟ ಚೆಕ್ ಪೋಸ್ಟ್ ಬಳಿ ತಡೆಯಲಾಗುತ್ತಿದ್ದು, ಕಾಳುಮೆಣಸಿನ ಸಾಸ್ ಸೋರಿಕೆಯಾಗಿದೆ ಎಂದು ಲಾರಿ ಚಾಲಕ ತಿಳಿಸಿದ್ದಾರೆ. ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಸೋರಿಕೆಯಾಗಿರುವ ದ್ರಾವಣದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ರಾಸಾಯನಿಕ ಸೋರಿಕೆ ಸಿದ್ದಾಪುರ, ನೆಲ್ಯಹುದಿಕೇರಿ ಭಾಗದಲ್ಲಿ ಆತಂಕ ಸೃಷ್ಟಿಸಿದೆ.