ಮಂಗಳೂರು,: ಸುರತ್ಕಲ್ ಸಮೀಪದ ಇಡ್ಯಾ ಗ್ರಾಮದಲ್ಲಿ ಫೈನಾನ್ಸ್ ಮೂಲಕ ಚಿಟ್ಫಂಡ್ ವ್ಯವಹಾರ ನಡೆಸುತ್ತಿದ್ದ ಅಶೋಕ್ ಭಟ್, ವಿದ್ಯಾ ಹಾಗೂ ಪ್ರಿಯಾಂಕ ಭಟ್ ಎಂಬವರು ತನಗೆ 10 ಲಕ್ಷ ರೂ.ವನ್ನು ನೀಡದೆ ವಂಚಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರೋಪಿಗಳ ಫೈನಾನ್ಸ್ನಲ್ಲಿ ನಾನು 10 ಲಕ್ಷ ರೂ. ಮೌಲ್ಯದ ಚಿಟ್ಫಂಡ್ಗೆ ಸೇರಿದ್ದು, 2019ರ ಸೆಪ್ಟೆಂಬರ್ನಿಂದ ಪ್ರತೀ ತಿಂಗಳು 50 ಸಾವಿರ ರೂ. ಚಿಟ್ಫಂಡ್ಗೆ ಪಾವತಿಸಲು ತಿಳಿಸಿದ್ದರು. ಅದಕ್ಕೆ ಒಪ್ಪಿದ ಬಳಿಕ ಆರೋಪಿಗಳು ಪ್ರತಿದಿನ 1,500 ರೂ.ವನ್ನು ನನ್ನಿಂದ ಪಡೆದುಕೊಂಡು ಹೋಗುತ್ತಿದ್ದರು. ತಿಂಗಳಿಗೊಮ್ಮೆ ಕಚೇರಿಗೆ ಹೋಗಿ ವ್ಯವಹಾರದ ಪಾಸ್ ಪುಸ್ತಕದಲ್ಲಿ ಹಣ ಕಟ್ಟಿರುವ ಬಗ್ಗೆ ನಮೂದಿಸಿ ಸಹಿ ಪಡೆದುಕೊಂಡು ಬರುತ್ತಿದ್ದೆ.
2021ರ ಮಾರ್ಚ್ 28ರಂದು ಫಂಡ್ ಮುಕ್ತಾಯವಾಗಿದ್ದು, ನಂತರದ ದಿನಗಳಲ್ಲಿ ಹಣ ಪಾವತಿಸುವುದಾಗಿ ಫೈನಾನ್ಸ್ ಮಾಲೀಕರು ತಿಳಿಸಿದ್ದರು. ಆದರೆ ಒಂದಲ್ಲಾ ಒಂದು ಕಾರಣ ನೀಡಿ ಹಣ ಕೊಡದೆ ತಪ್ಪಿಸಿಕೊಂಡಿದ್ದಾರೆ. ನನಗೆ ಮಾತ್ರವಲ್ಲದೆ ಇತರರಿಗೂ ಸಹಿತ ಸುಮಾರು 2 ಕೋ. ರೂ.ನಷ್ಟು ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.