ಮಂಗಳೂರು; ಹ್ಯಾಕರ್ ಗಳ ಮೋಸದ ಜಾಲಕ್ಕೆ ಸಿಲುಕಿ 11 ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಜೈಲುವಾಸ ಅನುಭವಿಸಿದ ಕಡಬದ ಯುವಕ ತವರಿಗೆ ವಾಪಾಸ್ ಆಗಿದ್ದಾರೆ.
ಚಂದ್ರಶೇಖರ್ ಸೋಮವಾರ ರಾತ್ರಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್, ಬಿಡುಗಡೆಗೆ ಯತ್ನಿಸಿದ್ದ ಕೊಕ್ಕಡ ಶ್ರೀಧರ ಗೌಡ ಮತ್ತಿತರರು ಅವರನ್ನು ಸ್ವಾಗತಿಸಿದರು.ಈ ವೇಳೆ ಮಗನನ್ನು ಅಪ್ಪಿಕೊಂಡು ತಾಯಿ ಕಣ್ಣೀರು ಹಾಕಿದ ದೃಶ್ಯ ಕರುಳು ಹಿಂಡುವಂತಿತ್ತು.
ಈ ವೇಳೆ ಮಾತನಾಡಿದ ಅವರು ಮಾಧ್ಯಮ ಗಳಲ್ಲಿ ನನ್ನ ವಿಚಾರದ ಬಗ್ಗೆ ವರದಿ ಬಂದಿರುವ ಕಾರಣ ನನ್ನ ಬಿಡುಗಡೆ ಸುಲಭ ಗೊಂಡಿದೆ. ಮಂಗಳೂರಿನವರು ತುಂಬಾ ಜನ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ಕೃತಜ್ಞನಾಗಿದ್ದೇನೆ. ತಾಯ್ನಾಡಿಗೆ ಬಂದಿರುವುದು ಮತ್ತು ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದೆ, ಮುಂದೆ ಬೇರೆ ಉದ್ಯೋಗ ಸಿಗುವ ಭರವಸೆ ಇದೆ ಎಂದರು.
ಸೌದಿಯಲ್ಲಿ ಜೈಲಿನಲ್ಲಿದ್ದಾಗ ತುಂಬಾ ಕಷ್ಟ ಆಗಿತ್ತು. ಯಾರ ಹತ್ತಿರವೂ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಮೊಬೈಲ್ ಕೊಟ್ಟರೂ ಎರಡೇ ನಿಮಿಷ ಮಾತನಾಡಬಹುದಿತ್ತು. ತಪ್ಪು ಮಾಡದೇ ನಾನು ಅಲ್ಲಿ ಸುಮ್ಮನೆ ಒಳಗಿದ್ದೆ, ಸೆರೆಮನೆ ವಾಸ ಅನುಭವಿಸಿದೆ ಎಂದರು.