ಅರಂತೋಡು: ಚಾಂಬಾಡು -ತೊಡಿಕಾನ ರಸ್ತೆ ಜಲ್ಲಿ ಕಲ್ಲು ಸಾಗಾಟದ ಘನ ಟಿಪ್ಪರ್ಗಳು ಸಂಚರಿಸಿ ರಸ್ತೆ ಸಂಪೂರ್ಣ ಚಿಂದಿ ಚಿಂದಿಯಾಗಿ ಲಘು ವಾಹನ ಸಂಚಾರಕ್ಕೆ ತೊಡಕ್ಕಾಗಿ ಪರಿಣಮಿಸಿದೆ.
ಕಳೆದ ಅನೇಕ ಸಮಯದಿಂದ ಕೊಡಗು ಜಿಲ್ಲೆಯ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಟದಪುರ ಕ್ರೇಸರ್( ಜಲ್ಲಿ ಕಲ್ಲು ಕೋರೆ)ನಿಂದ ದ.ಕ ಜಿಲ್ಲೆಯ ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಚಾಂಬಾಡು -ತೊಡಿಕಾನ ರಸ್ತೆಯ ಮೂಲಕ ದೊಡ್ಡ ದೊಡ್ಡ ಟಿಪ್ಪರ್ಗಳ ಮೂಲಕ ಜಲ್ಲಿ ಕಲ್ಲು ಸಾಗಾಟ ಅವ್ಯಾಹುತವಾಗಿ ನಡೆಯುತ್ತಿದೆ. ರಸ್ತೆಗೆ ಈ ಘನ ವಾಹನದ ಭಾರವನ್ನು ತಡೆದುಕೊಳ್ಳುವ ಸಾಮಥ್ಯ ಇಲ್ಲದೆ ರಸ್ತೆ ಚಿಂದಿ ಚಿಂದಿಯಾಗಿ ಮಾರ್ಪಟ್ಟಿದೆ.ಇದರಿಂದ ದ್ವಿಚಕ್ರ ವಾಹನಗಳು,ಇತರ ಲಘು ವಾಹನ ಸಂಚಾರಿಸಲು ಈ ರಸ್ತೆಯಲ್ಲಿ ಕಷ್ಟವಾಗುತ್ತಿದೆ.
ಕೊಡಗಿನವರ ವಿರೋಧ
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕ್ರೆಸರ್ ಇದ್ದು ಅದರ ಸಾಗಾಟವನ್ನು ಕೊಡಗಿನ ಪೆರಾಜೆ ರಸ್ತೆಯ ಮೂಲಕ ಸಾಗಾಟ ಮಾಡುವುದಕ್ಕೆ ಕೊಡಗಿನ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ.ಈ ಹಿನ್ನಲೆಯಲ್ಲಿ ದ.ಕ ಜಿಲ್ಲೆಯ ರಸ್ತೆಯ ಮೂಲಕವೇ ಜಲ್ಲಿ ಕಲ್ಲು ಸಾಗಾಟ ಮಾಡಲಾಗುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ಸ್ಥಳೀಯ ಜನರು ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಈ ಹದಗೆಟ್ಟ ರಸ್ತೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ವಾಹನದ ಮೂಲಕ ಈಗ ಸಾಗಿಸಿದರೆ ಆತನು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಅತೀ ವೇಗ ಸಂಚಾರ
ಈ ರಸ್ತೆಯ ಮೂಲಕ ಜಲ್ಲಿ ಕಲ್ಲು ಹೇರಿಕೊಂಡು ಹೋಗುವ ಟಿಪ್ಪರುಗಳು ಅತಿವೇಗ ಹಾಗೂ ಅಜಾಗರುಕತೆಯಿಂದ ಸಂಚಾರಿಸುತ್ತಿದ್ದು ಇದು ಅಪಾಯಕ್ಕೆ ಅಹ್ವಾನ ನೀಡುತ್ತಿದೆ.ರಸ್ತೆ ಕಿರಿದಾಗಿದೆ.ಅಲ್ಲದೆ ಹೆಚ್ಚು ತಿರುವುಗಳಿಂದ ಕೂಡಿದೆ.ಇದರಿಂದ ಇತರೇ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯ ಕಾದಿದೆ.ಇದರಿಂದ ಸ್ಥಳೀಯ ಜನರು ಆತಂಕಗೊಂಡಿದ್ದಾರೆ.
ಸೇತುವೆ ಬಾಳ್ವಿಕೆ ಕುತ್ತು
ಕೆಂಪು ಕಲ್ಲು ಸಾಗಾಟ ಮಾಡುವ ಸಂದರ್ಭ ಸ್ಥಳೀಯ ಹೊಳೆಗೆ 30 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಸೇತುವೆಯೊಂದು ಇದ್ದು ಇದರ ಮೂಲಕವೇ ಈ ದ ದೈತ್ಯಕಾರದ ಟಿಪ್ಪರುಗಳು ಸಂಚಾರಿಸಬೇಕು.ಇದರಿಂದ ಈ ಸೇತುವೆಯ ಬಾಳ್ವಿಕಗೂ ಕುತ್ತು ಬರಲಿದೆ.ಈಗಾಗಲೇ ಈ ಸೇತುವೆಯ ಪಿಲ್ಲರ್ಗಳು ಶಿಥಿಲಗೊಂಡಿದೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಸ್ಥಳೀಯರು ವಿನಂತಿಸಿಕೊಂಡಿದ್ದು ತಪ್ಪಿದಲ್ಲಿ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾದಿತು ಎಂದು ಎಚ್ಚರಿಸಿದ್ದಾರೆ.
ಅನುದಾನ ಬರಬಹುದು
ಈ ಕುರಿತು ಪ್ರತಿಕ್ರಿಯಿಸಿರುವ ಅರಂತೋಡು ಗ್ರಾಮ ಪಂಚಾಯತ್ ಪಿಡಿಒ ಜಯಪ್ರಕಾಶ್, ಚಾಂಬಾಡು -ತೊಡಿಕಾನ ರಸ್ತೆ ಹದಗೆಟ್ಟಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ.ಈ ರಸ್ತೆ ಅಭಿವೃದ್ದಿಗೆ ಅನುದಾನ ತರಲು ಜನಪ್ರತಿನಿಧಿಗಳು ಪ್ರಯತ್ನದಲ್ಲಿದ್ದಾರೆ.ಆದರೆ ಈ ತನಕ ಅನುದಾನ ಮಂಜುರಾಗಿಲ್ಲ.ಅನುದಾನ ಬಿಡುಗಡೆಯಾಗಬಹುದೆಂಬ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದರು.
ರಸ್ತೆ ಅಭಿವೃದ್ದಿ ಮಾಡಿ
ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಕ್ರೇಸರ್ ಇದ್ದು ನಮ್ಮ ದ.ಕ ಜಿಲ್ಲೆಯ ಚಾಂಬಾಡು -ತೊಡಿಕಾನ ರಸ್ತೆಯ ಮೂಲಕ ಘನ ಟಿಪ್ಪರ್ಗಲ್ಲಿ ಜಲ್ಲಿ ಕಲ್ಲು ಸಾಗಾಟ ನಡೆಯುತ್ತಿದೆ. ಇದರಿಂ ನಮ್ಮ ರಸ್ತೆ ಸಂಪೂರ್ಣ ನಾದುರಸ್ತಿಗೊಂಡಿದ್ದು ಲಘು ವಾಹನ ಸಂಚಾರಿಸಲು ಅಸಾಧ್ಯವಾಗಿದೆ.ಈ ಕಾರಣದಿಂದ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಂಡು ರಸ್ತೆ ಅಭಿವೃದ್ದಿ ಮಾಡಿ ಕೊಡಬೇಕೆಂದು ನನ್ನ ಮನವಿಯಾಗಿದೆ ಎಂದು ಸ್ಥಳೀಯರಾದ ಗೋವಾರ್ಧನ ಬೊಳ್ಳುರು ತಿಳಿಸಿದ್ದಾರೆ.