ಬಂಟ್ವಾಳ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಹೊಟೇಲ್ ಮಾಲಕಿಯ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ನಿವಾಸಿ ಆಶಾ ಅವರು ತಮ್ಮ ಪತಿಯ ಜತೆ ಸೇರಿ ಪಚ್ಚಿನಡ್ಕದಲ್ಲಿ ಹೊಟೇಲ್ ನಡೆಸುತ್ತಿದ್ದಾರೆ. ಮೇ 16ರಂದು ಮುಂಜಾನೆ 5.20ರ ಸುಮಾರಿಗೆ ತಿಂಡಿ ತಯಾರಿಸುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಅವರ ಹೋಟೆಲ್ ಗೆ ಆಗಮಿಸಿದ್ದರು. ಅವರಲ್ಲಿ ಸಹಸವಾರ ಹೆಲ್ಮೆಟ್ ಧರಿಸಿ ಹೊಟೇಲಿಗೆ ಬಂದು ಆಶಾ ಅವರಲ್ಲಿ ಸಿಗರೇಟ್ ಕೇಳಿ ಪಡೆದು ಅದನ್ನು ಹೊರಗೆ ನಿಂತಿದ್ದ ಬೈಕ್ ಸವಾರನಿಗೆ ನೀಡಿದ್ದ.
ಬಳಿಕ ಮತ್ತೆ ಆಗಮಿಸಿ ಚುಯಿಂಗ್ ಗಮ್ ಹಾಗೂ ಸೋಡಾ ಕುಡಿಯಲು ಕೇಳಿ ಖಾಲಿ ಬಾಟಲಿಯನ್ನು ಟೇಬಲ್ನಲ್ಲಿ ಇರಿಸಿ, ಪಕ್ಕದಲ್ಲೇ ನಿಂತಿದ್ದ ಆಶಾ ಅವರ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸುಮಾರು 15 ಗ್ರಾಂ ತೂಕದ ಸುಮಾರು 75 ಸಾವಿರ ರೂ. 75 ಸಾವಿರ ರೂ. ಮೌಲ್ಯದ ಕರಿಮಣಿ ಸರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.