ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ತಡೆದಿದ್ದಾರೆ. ಕಳೆದ ರಾತ್ರಿ ಮಾರತ್ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಾದಾಟಕ್ಕೆ ಮುಂದಾಗಿದ್ದ ಎರಡು ಗುಂಪಿನ 11 ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳಿಂದ 18 ಮಚ್ಚು ಹಾಗೂ ಲಾಂಗುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ರೋಹಿತ್ ಹಾಗೂ ಕಾಡುಬೀಸನಹಳ್ಳಿ ಸೋಮು ಎಂಬಿಬ್ಬರ ಗ್ಯಾಂಗ್ ನಡುವೆ ಭಾರೀ ಗಲಾಟೆ ನಡೆಯುವ ಸಾಧ್ಯತೆ ಇತ್ತು. ಗ್ಯಾಂಗ್ ವಾರ್ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ರು. ವಿಶೇಷ ತಂಡ ರಚನೆ ಮಾಡಿ, ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿ 11 ಆರೋಪಿಗಳನ್ನು ಬಂಧಿಸಿ, ಗ್ಯಾಂಗ್ವಾರ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕಲ್ ವಾರ್ಗೆ ಮಂಗಳೂರು ರೌಡಿಗಳ ಬಳಕೆ :
ಕಾಡುಬೀಸನಹಳ್ಳಿ ಸೋಮ ಹಾಗೂ ಕಾಡುಬೀಸನಹಳ್ಳಿ ರೋಹಿತ್ ನಡುವೆ ಹಳೇ ದ್ವೇಷವಿತ್ತು. ಹೀಗಾಗಿ ರೌಡಿ ರೋಹಿತ್, ಸೋಮನನ್ನು ಟಾರ್ಗೆಟ್ ಮಾಡಿದ್ದ. ಸೋಮನ ಮೇಲೆ ದಾಳಿ ನಡೆಸಲು ರೋಹಿತ್ ಜೊತೆ ಕೈಜೋಡಿಸಿದ್ದ ಆನೇಕಲ್ ರೌಡಿಶೀಟರ್ ಹರೀಶ್, ಸರ್ಜಾಪುರ ರೌಡಿ ಶೀಟರ್ ವೆಂಕಟೇಶ್, ಬೆಳ್ತಂಗಡಿ ತಾಲೂಕಿನ ಶಿಶಿಲದ ರೌಡಿಶೀಟರ್ ಕಿರಣ್ ಗೌಡ, ಮಂಗಳೂರು ಉಲ್ಲಾಳ ರೌಡಿ ವಿಶ್ವನಾಥ ಬಂಡಾರಿ ಸೇರಿ 11 ಜನರ ನಟೋರಿಯಸ್ ಗ್ಯಾಂಗ್ ಪೊಲೀಸರಿಗೆ ಸೆರೆಸಿಕ್ಕಿದೆ.
ಗ್ಯಾಂಗ್ವಾರ್ನ ಮಾಸ್ಟರ್ ಮೈಂಡ್ ರೋಹಿತ್, ಮಂಗಳೂರು ಮೂಲದ ರೌಡಿಶೀಟರ್ಗಳಾದ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ಕಿರಣ್ ಗೌಡ & ಮಂಗಳೂರಿನ ವಿಶ್ವನಾಥ್ನನ್ನು ಕಳೆದ 20 ದಿನಗಳ ಹಿಂದೆ ಬೆಂಗಳೂರಿಗೆ ಕರೆಸಿಕೊಂಡು ಕರಿಯಮ್ಮನ ಅಗ್ರಹಾರದಲ್ಲಿ ಇರಿಸಿದ್ದ. 20 ದಿನಗಳಿಂದ ಸೋಮ ಮತ್ತು ತಂಡವನ್ನ ರೋಹಿತ್ ಗ್ಯಾಂಗ್ ವಾಚ್ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳ ಮೇಲೆ ಈಗಾಗಲೇ ರಾಬರಿ, ಡಕಾಯತಿ ಸೇರಿದಂತೆ ಹಲವು ಪ್ರಕರಣಗಳಿವೆ ಸದ್ಯ ಮಾರತ್ಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದ್ದು, ಸಿಸಿಬಿಯಿಂದ ತನಿಖೆ ಮುಂದುವರೆದಿದೆ.