ಉಡುಪಿ: ತಲ್ವಾರು ತಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕೈ-ಕಾಲು ಕಟ್ಟಿ, ಕಾರಿನಲ್ಲಿ ತುಂಬಿಕೊಂಡು ಹೋದ ಬಗ್ಗೆ ಉಡುಪಿಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಾರಾಯಣ್ ನಾಯಕ್ ತನ್ನ ಮನೆಯಲ್ಲಿ ಮಲಗಿಕೊಂಡಿರುವಾಗ ಮಧ್ಯರಾತ್ರಿ 02:30 ಗಂಟೆಗೆ ನಾಯಿ ಬೊಗಳುವ ಶಬ್ದ ಕೇಳಿ ಕಿಟಕಿಯಿಂದ ನೋಡಿದಾಗ ಮೂರು ಜನ ಅಪರಿಚಿತರು ಅಂಗಳದಲ್ಲಿ ತಲ್ವಾರು ಮತ್ತು ಇತರ ಆಯುಧಗಳೊಂದಿಗೆ ತಿರುಗಾಡುತ್ತಿದ್ದರು.
ನಂತರ ಅಂಗಳದಲ್ಲಿ ಕಟ್ಟಿ ಹಾಕಿದ್ದ ಒಂದು ದನವನ್ನು ಹಗ್ಗ ಸಮೇತ ಬಿಚ್ಚಿ ಎಳೆದುಕೊಂಡು ಹೋಗುವಾಗ ಆ ದನವು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿದೆ. ಆಗ ಅದೇ ಹಗ್ಗದಿಂದ ಅಲ್ಲೆ ಇದ್ದ ಮತ್ತೊಂದು ದನವನ್ನು ಹಿಡಿದು ಕೈಕಾಲು ಕಟ್ಟಿ ಎಳೆದುಕೊಂಡು ಅಲ್ಲೆ ನಿಲ್ಲಿಸಿದ್ದ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ.
ದನದ ಮೌಲ್ಯ 2000 ಆಗಿದೆ. ಗೋಹತ್ಯೆ ಮಾಡಿ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಹೋಗಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.