ಮಂಗಳೂರು: ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ಅಡ್ಡಲಾಗಿ ಸುಮಾರು 30 ಕಿಲೋ ಮೀಟರ್ ತನಕ ದಾರಿ ಬಿಡದೇ ಕಾರು ಚಾಲಕನೋರ್ವ ಸತಾಯಿಸಿದ ಘಟನೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಯಿಂದ ಭಟ್ಕಳಕ್ಕೆ ರೋಗಿಯನ್ನು ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಪಾರ್ಕಿಂಗ್ ಲೈಟ್ ಹಾಕುತ್ತಾ ಮುಂದಿನಿಂದ ವೇಗವಾಗಿ ಸಂಚರಿಸುತ್ತಾ ಪದೇ ಪದೇ ಅಡ್ಡಿಪಡಿಸುತ್ತಾ ತರಳುತ್ತಿದ್ದ ಕಾರಿನಲ್ಲಿ ಇಬ್ಬರು ಯುವಕರು ಕೈ ಸನ್ನೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.
ಕಾರಿನಲ್ಲಿದ್ದ ಯುವಕರು ಸುಮಾರು 30 ಕಿಲೋ ಮೀಟರ್ ತನಕವೂ ತನ್ನ ಹುಚ್ಚಾಟ ತೋರಿಸಿದರೂ ಐಸಿಯು ಆಂಬುಲೆನ್ಸ್ ನಲ್ಲಿ ವೆಂಟಿಲೇಟರ್ ನಲ್ಲಿದ್ದ ರೋಗಿಯನ್ನು 1 ಗಂಟೆ 40 ನಿಮಿಷದಲ್ಲಿ ಭಟ್ಕಳಕ್ಕೆ ತಲುಪಿಸುವಲ್ಲಿ ಆಂಬುಲೆನ್ಸ್ ಚಾಲಕ ಯಶಸ್ವಿಯಾಗಿದ್ದಾರೆ.
“ಕಾರು ಚಾಲಕನ ಉದ್ಘಟತನ ತೋರುತ್ತಿದ್ದರೂ ರೋಗಿ ಹಾಗೂ ಅವರ ಕುಟುಂಬಿಕರ ಸುರಕ್ಷತೆ ದೃಷ್ಟಿಯಿಂದ ಆಂಬುಲೆನ್ಸ್ ಅನ್ನು ಜಾಗರೂಕವಾಗಿಯೇ ಚಲಾಯಿಸಬೇಕಿರುವುದು ನಮ್ಮ ಕರ್ತವ್ಯ ಎಂದು ಆಂಬುಲೆನ್ಸ್ ಚಾಲಕ ಅಯ್ಯುಬ್ ತಿಳಿಸಿದ್ದಾರೆ.
ಈ ಘಟನೆ ನಿನ್ನೆ ಸಾಯಂಕಾಲ ವೇಳೆಗೆ ನಡೆದಿದೆ. ತಡರಾತ್ರಿ ಉಡುಪಿಯ ಇನ್ನೊಂದು ಖಾಸಗಿ ಆಂಬುಲೆನ್ಸ್ ಚಾಲಕರಿಗೂ ಇದೇ ಕಾರು, ಅಡ್ಡಿಪಡಿಸಿತ್ತು. ಎಂದು ನಗರದ ಮತ್ತೋರ್ವ ಆಂಬುಲೆನ್ಸ್ ಚಾಲಕ ಆರೋಪಿಸಿದ್ದಾರೆ.
ಅಲ್ಲದೆ ಇಂತಹ ಉದ್ದಟತನದ ವಿರುದ್ದ ಕ್ರಮ ಕೈಗೊಳ್ಳಬೆಕು ಎಂದು ಆಂಬುಲೆನ್ಸ್ ಚಾಲಕರು ಒತ್ತಾಯಿಸಿದ್ದಾರೆ.