ಸುರತ್ಕಲ್: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾದ ಘಟನೆ ಸುರತ್ಕಲ್ ಸಮೀಪದ ತಡಂಬೈಲು ಮಾರಿಗುಡಿ ಬಳಿ ನಡೆದಿದೆ.
ಓರ್ವ ಯುವಕ ಮತ್ತು ಇಬ್ಬರು ಯುವತಿಯರು ಉಡುಪಿ ಕಡೆಯಿಂದ ಮಂಗಳೂರಿನತ್ತ ಕಾರಿನಲ್ಲಿ ತೆರಳುತ್ತಿದ್ದರೆನ್ನಲಾಗಿದೆ. ಇವರು ತೆರಳುತ್ತಿದ್ದ ಕಾರು ಇಂದು ಮುಂಜಾನೆ ತಡಂಬೈಲು ಮಾರಿಗುಡಿ ಬಳಿ ಅಪಘಾತಕ್ಕೀಡಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಮಾರಿಗುಡಿ ಬಳಿ ತಿರುವು ಇದ್ದು, ಈ ಬಗ್ಗೆ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದರಿಂದ ತಿರುವು ತಕ್ಷಣಕ್ಕೆ ಚಾಲಕನ ಅರಿವಿಗೆ ಬಂದಿಲ್ಲ. ಇದರಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ವಿಭಜಕಕ್ಕೆ ಢಿಕ್ಕಿ ಹೊಡೆದು ಹೆದ್ದಾರಿಯ ಇನ್ನೊಂದು ಪಾರ್ಶ್ವವನ್ನು ದಾಟಿ ರಸ್ತೆ ಬದಿಯ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದಿದೆ.
ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಕ್ರಗಳು ಸ್ಫೋಟಗೊಂಡು ಛಿಧ್ರವಾಗಿವೆ. ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.