ಉಡುಪಿ: ಗೂಳಿಯೊಂದರ ದಾಳಿಯಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಬೃಹತ್ ಗಾತ್ರದ ಗೂಳಿ ನಗರವೆಲ್ಲಾ ಸಂಚರಿಸಿ ಇಲ್ಲಿನ ಹಣ್ಣು ,ತರಕಾರಿ ಅಂಗಡಿಗೆ ನುಗ್ಗಿ ಹೊಟ್ಟೆ ತುಂಬುವಷ್ಟು ತಿಂದು , ರಸ್ತೆ ಬದಿಯಲ್ಲಿ ನಿಲ್ಲಿಸಿದ ದ್ವಿಚಕ್ರ ಕಾರು ಇನ್ನಿತರ ವಾಹನಗಳನ್ನು ಜಖಂ ಮಾಡಿದೆ.
ಬ್ರಹ್ಮಾವರದ ಇಂದಿರಾನಗರದ ನಿವಾಸಿ 71 ವರ್ಷದ ವಿಮಲ ನಾಯಕ್ ರನ್ನು ಇದೇ ಗೂಳಿ ಕೆಡವಿ ಹಾಕಿದ್ದು, ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ರೂ ಖರ್ಚು ಮಾಡಿದರೂ ಫಲಕಾರಿಯಾಗದೆ ಆಗಸ್ಟ್ 29 ರಂದು ಸಾವನ್ನಪ್ಪಿದ್ದರು. ಇನ್ನು ರಥ ಬೀದಿಯ ಬಳಿ ನಿವಾಸಿ ಗೌರಿ ನಾಯಕ್ ಅವರ ಮನೆಗೆ ನುಗ್ಗಿದ ಗೂಳಿ ಅವರನ್ನು ಕೆಡವಿದ್ದು ಅವರು ಕೆಲ ಸಮಯ ಕೋಮಾ ಸ್ಥಿತಿಯಲ್ಲಿದ್ದರು. ಕೂಲಿ ಕೆಲಸ ಮಾಡಿ ಬದುಕುವ ಅವರ ಮಗ ಶಿವಾನಂದ ಲಕ್ಷಾಂತರ ರೂ ಸಾಲ ಮಾಡಿ ಚಿಕಿತ್ಸೆ ಮಾಡಿದರೂ ಫಲಕಾರಿಯಾಗದೆ ಇದೀಗ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ ಗೌರಿ.
ಇನ್ನು ಇಂದಿರಾನಗರದ ಬಿಲ್ಲಿ ಬಾಯಿ ಎಂಬವರು ಕೂಡ ಗೂಳಿಯ ಏಟು ತಿಂದು ಮನೆಯಲ್ಲಿ ನಡೆದಾಡದ ಸ್ಥಿತಿಯಲ್ಲಿದ್ದಾರೆ.ಕೆಲವು ಸಮಯದ ಹಿಂದೆ ಇಲ್ಲಿನ ಯುವಕರು ಗೂಳಿಯನ್ನು ಹಿಡಿದು ಎರಡು ತಿಂಗಳು ಕಟ್ಟಿ ಸಾಕಿ ಪುನಃ ಬಿಟ್ಟಿದ್ದು ಇದರ ಕಾಟದಿಂದ ಮನೆಯಿಂದ ಹೊರಗೆ ಬರೋದಕ್ಕೆ ಜನ ಹೆದರುವಂತಾಗಿದೆ.