ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿದೆ.ಆರ್ ಆರ್ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಹೀವ್ ಪಬ್ಲಿಕ್ ಶಾಲೆಗೆ ಹುಚ್ಚ ವೆಂಕಟ್ ಎಂಬ ಹೆಸರಿನ ಇ.ಮೇಲ್ ನಿಂದ ಬೆದರಿಕೆ ಕರೆ ಬಂದಿದೆ.
ನಿಮ್ಮ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ಅದು ಬೆಳಗ್ಗೆ 10 ಗಂಟೆಗೆ ಸ್ಫೋಟಗೊಳ್ಳಲಿದ್ದು, 200 ಮೀಟರ್ ವ್ಯಾಪ್ತಿಯಲ್ಲಿ ಭಾರಿ ಅನಾಹುತ ಸಂಭವಿಸುತ್ತದೆ. ಸಾಧ್ಯವಾದರೆ ತಡೆಯುವ ಪ್ರಯತ್ನ ಮಾಡಿ ಎಂದು ಇ- ಮೇಲ್ನಲ್ಲಿ ಬೆದರಿಕೆ ಹಾಕಿದ್ದರು. ಆ ಮೇಲ್ಗಳನ್ನು ಶಾಲೆಯ ಎಂ.ಡಿ. ಐಶ್ವರ್ಯ ಹಾಗೂ ಆಡಳಿತ ಮಂಡಳಿಗೆ ಕಳಿಸಿದ್ದು ಅದನ್ನು ಕಂಡು ಗಾಬರಿಯಾದ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಸುದ್ದಿ ತಲುಪಿಸಿದ್ದರು.
ಆರ್ ಆರ್ ನಗರ ಪೊಲೀಸರು, ಶ್ವಾನದಳ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮೊದಲಿಗೆ ಶಾಲೆಗೆ ಬಂದಿದ್ದರು. ಮಕ್ಕಳನ್ನು ಸುರಕ್ಷತ ಸ್ಥಳಕ್ಕೆ ರವಾನೆ ಮಾಡಿದರು. ಮತ್ತೆ ಸ್ಕೂಲ್ ಕ್ಯಾಂಪಸ್ ಅನ್ನು ಇಂಚಿಂಚು ಬಿಡದೇ ಜಾಲಾಡಿ ಬಾಂಬ್ ಇಲ್ಲ ಅನ್ನೋದನ್ನು ಕನ್ಫರ್ಮ್ ಮಾಡಿಕೊಂಡು ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಇದೀಗ ಹುಸಿ ಬೆದರಿಕೆ ಹಾಕಿದ ಆರೋಪಿಯ ಪತ್ತೆಗೆ ತನಿಖೆ ನಡೆಯುತ್ತಿದೆ.