ಮಂಗಳೂರು: ಮಾಂಜಿ ಬೋಟ್ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಮುಳುಗಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ನಡೆದಿದೆ.
ಇನ್ನು ದೋಣಿಯಲ್ಲಿದ್ದ ಕ್ಯಾಪ್ಟನ್ ಸಹಿತ 6 ಮಂದಿ ಸಿಬ್ಬಂದಿಗಳನ್ನು ಮೀನುಗಾರಿಕಾ ದೋಣಿಯವರು ರಕ್ಷಿಸಿ ಮಂಗಳೂರಿಗೆ ಕರೆತಂದಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವಿವರ: ಮಂಗಳೂರಿನ ಹಳೆ ಬಂದರಿನಿಂದ ಸರಕು ಹೇರಿಕೊಂಡು ಜೀಲಾನಿ ಹೆಸರಿನ ಲಕ್ಷದ್ವೀಪ ನೋಂದಣಿಯ ಮಾಂಜಿ ಬೋಟ್ ಎ.22ರಂದು ಮಧ್ಯಾಹ್ನ ಹೊರಟಿದ್ದು, ಮಂಗಳೂರಿನಿಂದ ಸುಮಾರು 8 ನಾಟಿಕಲ್ ಮೈಲಿ ದೂರದಲ್ಲಿ ಮಾಂಜಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು.
ಬೋಟ್ ನಲ್ಲಿ ನೀರು ಸೋರಿಕೆ ಕಂಡು ಬಂದಿದ್ದು, ಅದರಲ್ಲಿದ್ದ ಸಿಬ್ಬಂದಿಗಳು ನೀರು ಹೊರಗೆ ಪಂಪ್ ಮಾಡಿ ದೋಷ ಸರಿಪಡಿಸಲು ಯತ್ನಿಸಿದ್ದರೂ ಆ ಯೋಜನೆ ಫಲಿಸಲಿಲ್ಲ. ಇನ್ನು ಇದೇ ವೇಳೆ ಹತ್ತಿರದಲ್ಲಿದ್ದ ಮೀನುಗಾರಿಕಾ ದೋಣಿಯವರು ಇದನ್ನು ಗಮನಿಸಿದ್ದು, ಮಂಗಳೂರಿಗೆ ಸಂಪರ್ಕಿಸಿ ಮತ್ತೊಂದು ದೋಣಿ ಕಳುಹಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.
ಮಂಗಳೂರಿನಿಂದ ಬೋಟ್ ಬಂದ ಬಳಿಕ ಮಾಂಜಿಯಲ್ಲಿದ್ದವರನ್ನು ಸುರಕ್ಷಿತವಾಗಿ ಬೋಟ್ನಲ್ಲಿ ಕರೆತರಲಾಗಿದೆ. ಆದರೆ ಮಾಂಜಿ ಮಾತ್ರ ಮುಳುಗಿದ್ದು ಅದರಲ್ಲಿದ್ದ ದಿನಸಿ ಸಾಮಗ್ರಿ, ಜಲ್ಲಿಕಲ್ಲು ಇತ್ಯಾದಿ ಸಮುದ್ರ ಪಾಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.


