ಶಿವಮೊಗ್ಗ: ಮದುವೆಯಾದ ಯುವತಿಗೆ ಗಂಡನನ್ನು ಬಿಟ್ಟು ಬರುವಂತೆ ಪರಿಚಯಸ್ಥ ಯುವಕನೋರ್ವ ಕಿರುಕುಳ ನೀಡುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಆತನ ಕಾಟವನ್ನು ತಾಳಲಾರದೆ ಇದೀಗ ಯುವತಿಯು ಠಾಣೆ ಮೆಟ್ಟಿಲೇರಿದ್ದಾಳೆ.
ಆ ಯುವತಿಯು ಶಿವಮೊಗ್ಗ ಮೂಲದ ವ್ಯಕ್ತಿಯನ್ನು ಏಳು ತಿಂಗಳ ಹಿಂದಷ್ಟೇ ಮದುವೆಯಾಗಿದ್ದಳು. ನವವಿವಾಹಿತೆಯಾದ ಆಕೆಯೊಂದಿಗೆ ಮದುವೆಗೂ ಮೊದಲು ಸಲುಗೆಯಿಂದಿದ್ದ ಪರಿಚಯಸ್ಥ ಯುವಕ, ಗಂಡನನ್ನು ಬಿಟ್ಟು ತನ್ನೊಂದಿಗಿರಲು ಹಾಸನಕ್ಕೆ ಬರುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಯುವತಿಯು ಆರೋಪಿಸಿದ್ದಾಳೆ.
ಆಕೆಯ ತಾಯಿಯಿಂದ ಪರಿಚಯವಾದ ವ್ಯಕ್ತಿ ಹಾಸನದ ಕೆಳವತ್ತಿ ಗಿರೀಶ್. ಆತ್ಮೀಯತೆಯಿದ್ದ, ನಮ್ಮಿಬ್ಬರ ನಡುವೆಯಿದ್ದ ಸ್ನೇಹ ಸಲುಗೆಗೆ ತಿರುಗಿತ್ತು. ನಮ್ಮಿಬ್ಬರ ಫೋಟೋಗಳು ವಿನಿಮಯಗೊಂಡಿದ್ದವು. ಈ ಫೋಟೋಗಳನ್ನು ಹೊಂದಿರುವ ಗಿರೀಶ್ ಗಂಡನನ್ನು ತೊರೆದು ಹಾಸನಕ್ಕೆ ಬಾರದೇ ಹೋದಲ್ಲಿ ಗಂಡನಿಗೆ ಹಾಗೂ ಅವರ ಸಂಬಂಧಿಕರಿಗೆ ತನ್ನ ಬಳಿಯಿರುವ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂಬುದಾಗಿ ವಿವಾಹಿತೆ ದೂರಿದ್ದಾಳೆ.
ನಾನು ಬೇರೆಯವರನ್ನು ಮದುವೆಯಾದ ಕಾರಣ ಜೀವ ಬೆದರಿಕೆ ಹಾಕುತ್ತಿದ್ದಾನೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾನೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಯುವತಿಯು ಹಾಸನದ ದೊಡ್ಡಪೇಟೆ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.