ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಕಾರ್ಯಕರ್ತರಿಬ್ಬರು ಹೆಲಿಪ್ಯಾಡ್ ನಲ್ಲಿ ಎಡವಟ್ಟು ಮಾಡಿದ ಘಟನೆ ನಡೆದಿದೆ.
ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾವೇಶ ಮುಗಿಸಿ ಹೆಲಿಪ್ಯಾಡ್ ನಲ್ಲಿ ಪ್ರಧಾನಿ ಮೋದಿ ಬೀಳ್ಕೊಡುಗೆ ವೇಳೆ ಯಡವಟ್ಟು ನಡೆದಿದೆ.
ಪ್ರಧಾನಿ ಬೀಳ್ಕೊಡುಗೆ ಸ್ವೀಕರಿಸಲು ಆಗಮಿಸಿದ ವೇಳೆ ಬಿಜೆಪಿ ಪ್ರೋಟೋಕಾಲ್ ಇನ್ ಚಾರ್ಜ್ ಆರ್. ಪ್ರಕಾಶ್ ಲೈನಪ್ ಲೈನ್ ದಾಟಿ ಮುಂದೆ ಹೋಗಿದ್ದರು.ಈ ವೇಳೆ ಒಂದು ಕ್ಷಣ ಗಾಬರಿಯಾದಂತಾದ ಪ್ರಧಾನಿ ಮೋದಿ ನಿಂತಲ್ಲಿಂದ ಹಿಂದೆ ಸರಿದು ಅಲ್ಲೇ ನಿಲ್ಲಿ, ಯಾಕೆ ಮುಂದೆ ಬರುತ್ತಿದ್ದೀರಿ, ನಾನೇ ಬರುತ್ತಿದ್ದೇನಲ್ಲಾ, ಅಲ್ಲೇ ನಿಲ್ಲಿ ಎಂದು ಗಂಭೀರವಾಗಿ ಹೇಳಿದರು.
ಇದಾದ ನಂತರ ಬಿಜೆಪಿ ಸ್ಟೇಟ್ ಸೆಲ್ ಸಂಚಾಲಕ ಇಂದರ್ ನಹರ್ ಕೂಡಾ ಮೋದಿ ಕಾಲಿಗೆ ಬೀಳಲು ಹೋದರು. ಆಗಲೂ ನಿಂತಲ್ಲಿಂದ ಹಿಂದೆ ಸರಿದಿದ್ದ ಪ್ರಧಾನಿ ಮೋದಿ ನಹರ್ ಅವರಿಗೂ ಯಾಕೆ ಈ ರೀತಿ ಮಾಡುತ್ತೀರಿ ಎಂದು ಗಂಭೀರವಾಗಿ ಹೇಳಿದರು. ನಂತರ ಬೀಳ್ಕೊಡುಗೆ ಸ್ವೀಕರಿಸಿದ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಿದರು.