ಉಡುಪಿ: ಶೇ.100ರಷ್ಟು ವಿದ್ಯುದ್ದೀಕರಣಗೊಂಡ ಮಹಾರಾಷ್ಟ್ರದ ರೋಹಾ ಹಾಗೂ ಮಂಗಳೂರಿನ ತೋಕೂರು ನಡುವಿನ 740ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗದಲ್ಲಿ ವಿದ್ಯುತ್ ರೈಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ ಶೇ.೧೦೦ ವಿದ್ಯುದ್ದೀಕರಣಗೊಂಡ ಮಾರ್ಗಕ್ಕೆ ಚಾಲನೆ ನೀಡುತ್ತಿದ್ದಂತೆ ಉಡುಪಿ, ಮಡಗಾಂವ್ ಹಾಗೂ ರತ್ನಗಿರಿ ಕೊಂಕಣ ರೈಲು ನಿಲ್ದಾಣಗಳಿಂದ ರೈಲುಗಳು ತಮ್ಮ ಸಂಚಾರವನ್ನು ಪ್ರಾರಂಭಿಸಿದವು.
740 ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಮೂಲಕ ಹಾದು ಹೋಗುತ್ತದೆ. 740 ಕಿ.ಮೀ.. ಉದ್ದದ ರೈಲು ಮಾರ್ಗದ ವಿದ್ಯುದ್ದೀಕರಣಕ್ಕೆ ಒಟ್ಟು 1287 ಕೋಟಿ ರೂ. ವೆಚ್ಚವಾಗಿದ್ದು, ಇದನ್ನು ಐದು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ತೋಕೂರಿನಿಂದ ಬಿಜೂರುವರೆಗೆ, ಬಿಜೂರಿನಿಂದ ಕಾರವಾರದವರೆಗೆ, ಕಾರವಾರದಿಂದ ತೀವಿಂವರೆಗೆ ತೀವಿಂನಿಂದ ರತ್ನಗಿರಿ ಹಾಗೂ ರತ್ನಗಿರಿಯಿಂದ ರೋಹಾದವರೆಗೆ ಕಾಮಗಾರಿ ನಡೆದು 2022 ಮಾರ್ಚ್ ಕೊನೆಯಲ್ಲಿ ಪೂರ್ಣಗೊಂಡಿತ್ತು. ಕೊಂಕಣ ರೈಲು ಮಾರ್ಗದ ವಿದ್ಯುದ್ದೀಕರಣದಿಂದಾಗಿ ಕೊಂಕಣ ರೈಲ್ವೆಗೆ ವಾರ್ಷಿಕ ೩೦೦ಕೋಟಿ ರೂ. ಉಳಿತಾಯವಾಗಲಿದೆ..