ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಸದಸ್ಯೆಯರ ನೂಕಾಟದಲ್ಲಿ ಕೆಳಗೆ ಬಿದ್ದಿದ್ದ ಗರ್ಭಿಣಿ ಸದಸ್ಯೆ ಚಾಂದಿನಿ ನಾಯಕ್ ಅವರಿಗೆ ಮಹಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಪಾತವಾಗಿದೆ.
ಏನಿದು ಪ್ರಕರಣ?
ಮಹಾಲಿಂಗಪುರದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಗೆ ನ.9ರಂದು ಚುನಾವಣೆ ನಡೆದಿತ್ತು. ಈ ವೇಳೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಚಾಂದಿನಿ ಅಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್ನ್ನು ಬೆಂಬಲಿಸಲು ನಿರ್ಧರಿಸಿದ್ರು. ಈ ವೇಳೆ, ಚಾಂದಿನಿಯನ್ನು ಗೈರಾಗಿಸಲು ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ಪುರಸಭೆಯಿಂದ ಹೊರ ಹೋಗುವಂತೆ ಅವರನ್ನು ನೂಕಾಡಿದ್ದರು ಎಂದು ಹೇಳಲಾಗಿದೆ.
ತಳ್ಳಾಟ ನೂಕಾಟದಲ್ಲಿ ಶಾಸಕ ಸಿದ್ದು ಸವದಿ ತನ್ನನ್ನು ಮೆಟ್ಟಿಲಿನಿಂದ ಕೆಳಗೆ ತಳ್ಳಿದ್ದರು ಎಂದು ಚಾಂದಿನಿ ನಾಯಕ್ ಆರೋಪಿಸಿದ್ದಾರೆ. ಜೊತೆಗೆ, ಚಾಂದಿನಿ ಕೆಳಗೆ ಬೀಳುತ್ತಿದ್ದಂತೆ ಆಕೆಯನ್ನು ಇತರೆ ಕಾರ್ಯಕರ್ತರು ಎಳೆದಾಡಿದ್ದರು. ಆ ವೇಳೆ ಚಾಂದಿನಿ ಅವರು ಮೂರು ತಿಂಗಳ ಗರ್ಭಿಣಿಯಾಗಿದ್ದರು. ತಳ್ಳಾಟದ ವೇಳೆ ಹೊಟ್ಟೆಗೆ ಏಟು ಬಿದ್ದು, ಮಗುವಿನ ಬೆಳವಣಿಗೆಗೆ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಚಾಂದಿನಿ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸಿಕೊಳ್ಳಬೇಕಾಯಿತು ಎಂದು ಸದಸ್ಯೆ ಪತಿ ನಾಗೇಶ್ ನಾಯಕ್ ಮಾಹಿತಿ ನೀಡಿದ್ದಾರೆ.