ಮುಂಬೈ : ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಸೇವಕ ಬಾಬಾ ಅಮ್ಟೆ ಅವರ ಮೊಮ್ಮಗಳು ಮತ್ತು ಆನಂದವನ್ ನಲ್ಲಿರುವ ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಶೀತಲ್ ವಿಕಾಸ್ ಅಮ್ಟೆ ಕಾರಜಿಗಿ ಇಂದು ಮಹಾರಾಷ್ಟ್ರದ ವರೋರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡಾ.ಶೀತಲ್ ವಿಕಾಸ್ ಅಮ್ಟೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವರೋರಾ ಆಸ್ಪತ್ರೆಯ ವೈದ್ಯರು ಅವರು ಮೃತರಾದರೆಂದು ಘೋಷಿಸಿದರು.ಕೆಲ ವಿಷದ ಚುಚ್ಚುಮದ್ದನ್ನು ಆಕೆ ತೆಗೆದುಕೊಂಡಿದ್ದರೆಂದು ಮೂಲಗಳು ತಿಳಿಸಿವೆ.
ಡಾ.ಶೀತಲ್ ಅವರು ಇತ್ತೀಚೆಗೆ ಮಹಾರೋಗಿ ಸೇವಾ ಸಮಿತಿಯಅಕ್ರಮಗಳ ಬಗ್ಗೆ ಆರೋಪಗಳನ್ನು ಹೊರಿಸಿದ್ದರು ಮತ್ತು ಟ್ರಸ್ಟ್ ಮ್ಯಾನೇಜ್ಮೆಂಟ್ ಮತ್ತು ಅವರ ಕುಟುಂಬವನ್ನು ದೂಷಿಸಿದ್ದರು. ಈ ಗಂಭೀರ ಆರೋಪಗಳನ್ನು ಮಾಡುವ ವೀಡಿಯೊವನ್ನು ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ನಂತರ ಅದನ್ನು ಎರಡು ಗಂಟೆಗಳಲ್ಲಿ ತೆಗೆದುಹಾಕಲಾಗಿದೆ.
ಬಳಿಕ ಆರೋಪಗಳನ್ನು ನಿರಾಕರಿಸಿ ಡಾ. ಶೀತಲ್ ಅವರ ತಂದೆ ಡಾ. ವಿಕಾಸ್ ಅಮ್ಟೆ ಮತ್ತು ಅವರ ಸಹೋದರ ಡಾ.ಪ್ರಕಾಶ್ ಅಮ್ಟೆ ನವೆಂಬರ್ 24 ರಂದು ಜಂಟಿ ಹೇಳಿಕೆ ನೀಡಿದ್ದರು. ಈ ಪತ್ರದಲ್ಲಿ ಡಾ.ವಿಕಾಸ್ ಅಮ್ಟೆ, ಅವರ ಪತ್ನಿ ಡಾ.ಭಾರತಿ, ಡಾ.ಪ್ರಕಾಶ್ ಅಮ್ಟೆ ಮತ್ತು ಅವರ ಪತ್ನಿ ಡಾ.ಮಂದಾಕಿನಿ ಅಮ್ಟೆ ಅವರ ಸಹಿ ಇತ್ತು.