ಕಾರ್ಕಳ: ಕಾರ್ಕಳ ಬಿಜೆಪಿ ಸಮಿತಿಯು ಪರಶುರಾಮ ಥೀಮ್ ಪಾರ್ಕ್ ಯೋಜನೆ ಬಗ್ಗೆ ಅಪಪ್ರಚಾರ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಹಾಗೂ ಕಾನೂನು ಉಲ್ಲಂಘನೆ ಮಾಡಿದವರ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಪರಶುರಾಮ ಥೀಮ್ ಪಾರ್ಕ್ ಪ್ರಕರಣದಲ್ಲಿ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿರುವ ಜಿಲ್ಲಾಡಳಿತದ ಕ್ರಮ ಸ್ವಾಗತಾರ್ಹವಾಗಿದೆ. ಜಿಲ್ಲಾಡಳಿತವು ಮೊದಲ ದಿನದಿಂದಲೂ ಇಂತಹ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಿದ್ದರೆ, ಪ್ರವಾಸಿ ಯೋಜನೆಯೊಂದು ಇಷ್ಟೊಂದು ಅಪಪ್ರಚಾರಗಳಿಗೆ ಒಳಗಾಗುತ್ತಿರಲಿಲ್ಲ. ತನಿಖೆ ನಡೆದು ಕಾಮಗಾರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿತ್ತು, ತಡವಾಗಿ ಜಿಲ್ಲಾಡಳಿತ ಎಚ್ಚರಗೊಂಡಿದೆ. ಜಿಲ್ಲಾಧಿಕಾರಿಗಳ ಈ ಕ್ರಮ ಇಷ್ಟಕ್ಕೇ ಸೀಮಿತವಾಗಿರದೆ ಯೋಜನೆ ಕುರಿತು ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಸಭೆಗಳಲ್ಲಿ ಭ್ರಷ್ಟಾಚಾರ ನಡೆದಿದೆ, ನಕಲಿ ಮೂರ್ತಿ ಎಂದು ಸಾಕಷ್ಟು ಅಪಪ್ರಚಾರ ನಡೆಸಿದವರ ವಿರುದ್ಧವೂ ತತ್ ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಥೀಮ್ ಪಾರ್ಕ್ಗೆ ಸಾರ್ವಜನಿಕ ಪ್ರವೇಶ ನಿಷೇಧವಿದ್ದರೂ, ನಿಷೇಧವನ್ನು ಉಲ್ಲಂಘಿಸಿ ಒಳ ಪ್ರವೇಶ ಮಾಡಿ ಸಾರ್ವಜನಿಕ ಸ್ವತ್ತನ್ನು ಹಾನಿ ಮಾಡಿ, ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧವೂ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಕಳದ ಪ್ರ. ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಉದಯ್ ಎಸ್. ಕೋಟ್ಯಾನ್, ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ, ಕಾರ್ಕಳ ನಗರಾಧ್ಯಕ್ಷ ನಿರಂಜನ್ ಜೈನ್, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ,
ಉಪಾಧ್ಯಕ್ಷ ಕಿರಣ್ ಕುಮಾರ್ ಉಡುಪಿ, ಬೋಳ ಜಯರಾಮ್ ಸಾಲ್ಯಾನ್, ಶಂಕರ್ ಕುಂದರ್ ಸೂಡ, ಪ್ರ. ಕಾರ್ಯದರ್ಶಿ ಸುರೇಶ್ ಕಾಬೆಟ್ಟು, ವಿಘ್ನೇ ಶ್ ರಾವ್ ಬಂಗ್ಲೆಗುಡ್ಡೆ, ಬಿಜೆಪಿ ಪ್ರಮುಖರಾದ ರವೀಂದ್ರ ಕುಮಾರ್, ಸೂರ್ಯಕಾಂತ ಶೆಟ್ಟಿ ಕೆದಿಂಜೆ, ಯುವ ಮೋರ್ಚಾದ ರಜತ್ ರಾಮ್ ಮೋಹನ್, ರೈತ ಮೋರ್ಚಾದ ಮೋಹನ್ ಶೆಟ್ಟಿ ಬೋಳ, ಸುನಿಲ್ ಪೂಜಾರಿ ಚಾರ, ದೇವೇಂದ್ರ ಶೆಟ್ಟಿ ಬೆಳ್ಮಣ್, ಹೆಬ್ರಿ ತಾಲೂಕು ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಪ್ರಭಾಕರ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


