ಕಾರವಾರ: ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಗೆ 50 ಸಾಧು- ಸಂತರು ಸ್ಪರ್ಧಿಸುತ್ತಾರೆ, ಭಟ್ಕಳದಲ್ಲಿ ಪ್ರಥಮ ಪ್ರಯೋಗ ತಾವೇ ಮಾಡುವುದಾಗಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಇತ್ತೀಚಿಗೆ ನೀಡಿದ್ದ ಹೇಳಿಕೆಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚಿಗೆ ಕಾರ್ಯಕ್ರಮಕ್ಕೆ ಬಂದಾಗ ಅವರೊಂದಿಗೆ ಮಾತನಾಡಿದೆವು. ಈ ವೇಳೆ ಸಂಸದ ಅನಂತಕುಮಾರ್ ಹೆಗಡೆ, ಶಾಸಕ ಸುನೀಲ್ ನಾಯ್ಕರೂ ಇದ್ದರು. ಈ ವೇಳೆ ಪ್ರೀತಿಯಿಂದ ಅವರು ನಮ್ಮೊಡನೆ ಮಾತನಾಡಿದರು. ಅದೇ ಸಂದರ್ಭದಲ್ಲಿ ನಾನು, ಪೂಜ್ಯ ಸ್ವಾಮೀಜಿಯವರೆ, ನಿಮ್ಮ ಭಾವನೆಗಳಿಗೆ ಗೌರವ ಕೊಡುತ್ತೇವೆ. ಅದು ಆಶೀರ್ವಾದವಾಗಿ ನಮ್ಮೆಲ್ಲರ ಮೇಲೆ ಪರಿವರ್ತನೆಯಾಗಲಿ ಎಂದೆ. ಅದಕ್ಕೆ ಅವರು ಬಹಳ ಪ್ರೀತಿಯಿಂದ ಶುಭವಾಗಲಿ ಎಂದಿದ್ದಾರೆ. ಇದು ನಮಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದವರು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ಕಲ್ಪನೆಯಲ್ಲಿ ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ಅದನ್ನು ಎಲ್ಲರೂ ಪಾಲಿಸುತ್ತಾರೆ. ಸಾಧು- ಸಂತರ ಸ್ಥಾನದಲ್ಲಿರುವ ಯತಿಶ್ರೇಷ್ಠರು ಕಾಲಕಾಲಕ್ಕೆ ಅನೇಕ ಸಲಹೆ- ಸೂಚನೆಗಳನ್ನು ನೀಡುತ್ತಾರೆ. ಬಿಜೆಪಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಸಾಮಾಜಿಕ ಕಳಕಳಿಯೊಂದಿಗೆ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುವ ಮೊದಲ ರಾಜಕೀಯ ಪಕ್ಷ ಎಂದು ಭಾರತದಲ್ಲಿ ಪ್ರಖ್ಯಾತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ವ ಸಾಧು-ಸಂತರೂ ಬಿಜೆಪಿ, ಪ್ರಧಾನಿ ಮೋದಿಯವರನ್ನ ಬೆಂಬಲಿಸುವುದನ್ನ ನಾವು ಕಾಣುತ್ತಿದ್ದೇವೆ. ಮುಂದೆಯೂ ಅವರ ಬೆಂಬಲ ನಮಗಿರುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.