ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮಲವಂತಿಗೆ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಬಂಡೆಯೊಂದು ಉರುಳಿಬಿದ್ದು ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಗ್ಗೆ 9-30ರ ಸುಮಾರಿಗೆ ದಿಡುಪೆ ಹೆಬ್ಬಾರ್ತಿಕಲ್ ಗುಡ್ಡದಿಂದ ಬಂಡೆ ಕುಸಿದು ಬಿದ್ದಿದೆ. ಇನ್ನು ಬಂಡೆ ಬಿದ್ದ ಭಾರೀ ಸದ್ದಿಗೆ ಇಡೀ ಊರಿನ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಮನೆಯೊಳಗಿದ್ದ ಮಂದಿ ಹೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇನ್ನು ಬಂಡೆ ಬಿದ್ದ ತಕ್ಷಣ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿತ್ತು. ಇನ್ನು ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರೋದರಿಂದ ಮಣ್ಣು ಸಡಿಲಗೊಂಡು ಬಂಡೆ ಉರುಳಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೈದಾಡಿ ಘಾಟಿ ಕೆಳಗಿರುವ ಹೆಬ್ಬರ್ ತಿಕಲ್ ಗುಡ್ಡದಲ್ಲಿ ಈ ಘಟನೆ ಸಂಭವಿಸಿದ್ದು, ಗುಡ್ಡದ 3 ಕಿ.ಮೀ. ದೂರದಲ್ಲಿ 10 ಕ್ಕೂ ಅಧಿಕ ಮನೆಗಳಿವೆ. ಹೀಗಾಗಿ ಸ್ಥಳೀಯ ನಿವಾಸಿಗಳಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ.
ಕಳೆದ ಬಾರಿ ಕೂಡ ಇದೇ ವ್ಯಾಪ್ತಿಯ ತುಲುಪುಲೆ ಬದಿ ಗುಡ್ಡ ಜರಿದು ತೋಟಗಳಿಗೆ ಹಾನಿಯಾಗಿತ್ತು.