ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ನಿವಾಸಿ ತೇಜಸ್ವಿನಿ(23) ಎಂಬ ಯುವತಿ ಫೆ.22 ರಿಂದ ಮನೆಯಿಂದ ಕಾಣೆಯಾಗಿದ್ದು, ಇಂದು (ಮಾ.3) ನೆರಿಯದ ಕೋಲೋಡಿ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಧರ್ಮಸ್ಥಳ ಪಿಎಸ್ಐ ಪವನ್ ನಾಯಕ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಶವಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪ್ರತೆಗೆ ರವಾನಿಸಲಾಗಿದೆ. ಇಂದು ಸಂಜೆ ಸ್ಥಳೀಯರು ಬಿದಿರು ಕಡಿಯುವ ಉದ್ದೇಶದಿಂದ ಕೋಲೋಡಿ ಕಾಡಿಗೆ ಹೋಗಿರುವ ಸಂದರ್ಭದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಘಟನೆಯ ವಿವರ:
ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ ಕೆ.ದಂಪತಿ ಪುತ್ರಿಯಾಗಿರುವ ತೇಜಸ್ವಿನಿ ಯವರು ಕಳೆದ ನಾಲ್ಕು ವರ್ಷಗಳಿಂದ ಉಜಿರೆ ಪರಿಸರ ನಿವಾಸಿಯೊಬ್ಬರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡು, ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದು ಅವರ ಮನೆಯಲ್ಲಿಯೇ ವಾಸ್ತವ್ಯವಿದ್ದರು. ಫೆ.22ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದರು.
ತೇಜಸ್ವಿನಿ ಯವರು ಫೆ.22ರಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಹೊರಟವರು ಸಂಜೆ 4 ಗಂಟೆ ಸುಮಾರಿಗೆ ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಕೋಲೋಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ತನ್ನ ಅಕ್ಕ ಸುಮಂಗಳರವರಿಗೆ ಸಿಕ್ಕಿದ್ದು ಆಕೆ ತಮ್ಮೊಟ್ಟಿಗೆ ಜೀಪಿನಲ್ಲಿ ತಂಗಿ ತೇಜಸ್ವಿನಿಯನ್ನು ಕರೆದುಕೊಂಡು ಹೋಗಿ ಮನೆಯ ಹತ್ತಿರ ಇಳಿಸಿ ಬಳಿಕ ಪತಿಯೊಂದಿಗೆ ತಮ್ಮ ಮನೆಗೆ ಹಿಂದಿರುಗಿದ್ದರು.
ಆದರೆ ರಾತ್ರಿ ೭ಗಂಟೆಯ ವರೆಗೂ ತೇಜಸ್ವಿನಿಯವರು ಉಜಿರೆಯ ಮನೆಗೆ ಮರಳಿ ಬಾರದೆ ಇರುವ ಬಗ್ಗೆ ಮನೆಯೊಡತಿ ಯುವತಿಯ ಮನೆಯವರಿಗೆ ಫೋನ್ ಕರೆ ಮೂಲಕ ತಿಳಿಸಿದ್ದರು. ಯುವತಿಯ ಮೊಬೈಲ್ ಕೂಡ ಸ್ವೀಚ್ ಆಫ್ ಆಗಿದ್ದು ಅತ್ತ ತಾಯಿ ಮನೆಗೂ ಹೋಗದೆ ಇತ್ತ, ಕೆಲಸದ ಮನೆಗೂ ಹೋಗದೆ ನಾಪತ್ತೆಯಾಗಿದ್ದರು.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಯುವತಿಯ ಪೋಷಕರು ದೂರು ನೀಡಿದ್ದು, ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಯುವತಿ ಯಾವುದೋ ಕಾರಣಗಳಿಂದ ನೊಂದು ವಿಷ (ಅಡಿಕೆ ತೋಟಕ್ಕೆ ಸಿಂಪಡಿಸುವ ಮೈಲ್ ತುತ್ತು) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.