ಬೆಳ್ತಂಗಡಿ : ವೇಣೂರು ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಇರ್ವತ್ತೂರು ಗ್ರಾಮದ ಪರಾರಿಯ ಎಂಬಲ್ಲಿ ಸರಕಾರಿ ಜಾಗದಲ್ಲಿ ಜ.10 ರಂದು ಬೆಳಗ್ಗೆ 10 ಗಂಟೆಗೆ ಸುಮಾರು 3 ರಿಂದ 4 ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಸ್ಥಳೀಯರಿಗೆ ಪತ್ತೆಯಾಗಿತ್ತು.
ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡ ಬಳಿಕ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವೇಣೂರ ಅರಣ್ಯ ಇಲಾಖೆಯ ನಾಯಿನಾಡ್ ನಲ್ಲಿರುವ ಗಸ್ತುವಲಯ ವಸತಿಗೃಹದ ಬಳಿ ಬಂಟ್ವಾಳ ಪಶುವೈದ್ಯರಾದ ಜ.11 ರಂದು ಅಶೋಕ್ ಶೆಟ್ಟಿ ನೇತೃತ್ವದಲ್ಲಿ ಚಿರತೆಯ ಶವಪರೀಕ್ಷೆ ಮಾಡಲಾಗಿದ್ದು. ಈ ವೇಳೆ ಚಿರತೆಯ ಕುತ್ತಿಗೆ ಭಾಗಕ್ಕೆ ಗಾಯಗಳ ಗುರುತು ಮತ್ತು ಹೊಟ್ಟೆಯಲ್ಲಿ ನಾಯಿ ಮಾಂಸ ಕೂಡ ಪತ್ತೆಯಾಗಿದೆ.
ಶವಪರೀಕ್ಷೆ ನಡೆಸಿದ ಬಳಿಕ ಅಲ್ಲಿಯೇ ಅರಣ್ಯ ಇಲಾಖೆಯ ನಿಯಮದಂತೆ ಚಿರತೆಯನ್ನು ಎಸಿಎಫ್ ಶ್ರೀಧರ್.ಪಿ ನೇತೃತ್ವದಲ್ಲಿ ಕಾನೂನು ಪ್ರಕಾರ ದಹನ ಮಾಡಲಾಯಿತು.ಚಿರತೆ ಕಾಡುಹಂದಿಗೆ ಇಟ್ಟ ಉರುಳಿಗೆ ಅಥವಾ ತಂತಿಬೇಲಿಗೆ ಸಿಕ್ಕಿಬಿದ್ದು ಗಾಯಗೊಂಡು ಬಳಿಕ ಮೃತಪಟ್ಟ ಶಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶುವೈದ್ಯರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಶವಪರೀಕ್ಷೆ ಮಾಡಿದ ಚಿರತೆಯ ವಿವಿಧ ಭಾಗಗಳನ್ನು ಸಾವಿನ ಬಗ್ಗೆ ದೃಢಪಡಿಸಲು ಹೈದರಾಬಾದ್ ಅಥವಾ ಬೆಂಗಳೂರು ಎಫ್ಎಸ್ಎಲ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುವುದು ಎಂದು ಮಹಾಎಕ್ಸ್ ಪ್ರೆಸ್ ವೆಬ್ ಸೈಟಿಗೆ ಮೂಡಬಿದಿರೆಯ ಎಸಿಎಫ್ ಶ್ರೀಧರ್.ಪಿ ಮಾಹಿತಿ ನೀಡಿದ್ದಾರೆ.ಚಿರತೆಯ ಶವಪರೀಕ್ಷೆ ವೇಳೆ ಬಂಟ್ವಾಳ ಪಶುವೈದ್ಯ ಅಶೋಕ್ ಶೆಟ್ಟಿ ತಂಡ ಹಾಗೂ ಮೂಡಬಿದಿರೆ ಎಸಿಎಫ್ ಶ್ರೀಧರ್.ಪಿ, ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ, ಡಿ.ಆರ್.ಎಫ್ ಅಶ್ವಿತ್, ಸುನಿಲ್ ಕುಮಾರ್, ಗಸ್ತು ಅರಣ್ಯ ಪಾಲಕ ಸುರೇಶ್ ಮತ್ತು ದಿವಕರ್ ಹಾಗೂ ಇತರ ಸಿಬ್ಬಂದಿ ಭಾಗಿಯಾಗಿದ್ದರು.


