ಬೆಳ್ತಂಗಡಿ : ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಅತ್ಯಾಚಾರ ಮಾಡಿ , ಗರ್ಭಿಣಿಯಾದ ನಂತರ ಮೋಸ ಮಾಡಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ.
ಪ್ರಕರಣದಲ್ಲಿ ಆರೋಪಿ ಲಾಯಿಲ ಗ್ರಾಮದ ಕಿರಣ್ ಎಂಬವನನ್ನು ಪೊಲೀಸರು ಬಂಧಿಸಿರುತ್ತಾರೆ.ಆರೋಪಿ ಕಿರಣ್ ಎಂಬಾತನು ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು ,ಬಳಿಕ ತುಂಬಾ ಸಲುಗೆಯಿಂದಿದ್ದು,ಮನೆಗೆ ಹೋಗಿ ಬರುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದನು.

ದಿನಾಂಕ:26-11-2020 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಳಿಗ್ಗೆ ಸುಮಾರು 11-30 ಗಂಟೆಗೆ ಆರೋಪಿಯು ಸಂತ್ರಸ್ತೆಯ ಮನೆಗೆ ಹೋಗಿ , ಮಾತನಾಡುತ್ತಾ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು, ಸಂತ್ರಸ್ತೆ ಆಕ್ಷೇಪಿಸಿದರೂ ಕೇಳದೇ “ನಾನು ನಿನ್ನನ್ನು ಮದುವೆಯಾಗುವ ಹುಡುಗ” ಎಂದು ನಂಬಿಸಿ ಬಲತ್ಕಾರವಾಗಿ ಲೈಂಗಿಕ ಸಂಪರ್ಕ ಮಾಡಿ 7 ½ ತಿಂಗಳ ಗರ್ಭವತಿಯಾಗಲು ಕಾರಣನಾಗಿರುತ್ತಾನೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ . ಇದಲ್ಲದೇ ಸಂತ್ರಸ್ತೆಯ ಇಚ್ಚೆಗೆ ವಿರುದ್ದವಾಗಿ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿರುತ್ತಾನೆ ಎಂದು ದೂರು ನೀಡಿರುತ್ತಾರೆ.
ಈ ಆರೋಪಿಯ ಮೇಲೆ ಒಂದು ವರ್ಷದ ಹಿಂದೆ ಧರ್ಮಸ್ಥಳದ ಅಪ್ರಾಪ್ತ ಯುವತಿಯ ಮೇಲೆ ಬಲಾತ್ಕಾರದ ಮದುವೆ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿತ್ತು .


