
ಬೆಳ್ತಂಗಡಿ : ಸರಕಾರ ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರತಿ ತಿಂಗಳು ಪಡಿತರ ವಿತರಣೆಯನ್ನು ಮಾಡುವ ಯೋಜನೆಯನ್ನೇನೋ ಮಾಡಿದೆ, ಆದರೆ ಇದು ಭ್ರಷ್ಟರ ಜೇಬು ತುಂಬಿಸುವ ಯೋಜನೆಯಾಗಿ ಮಾರ್ಪಾಡಾಗಿದೆ ಎಂಬುದು ಈ ಘಟನೆಯಿಂದ ಸಾಬೀತಾದಂತಿದೆ.

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮ ಮತ್ತು ಪಟ್ರಮೆ ಗ್ರಾಮದ ಲೈನಿಗೆ ಆಗಸ್ಟ್ 19 ರಂದು ಬೆಳಗ್ಗೆ ಲಾರಿ ಪೂರ್ತಿ ಸರಕಾರದ ಪಡಿತರ ಅಕ್ಕಿ ಬಂದಿದ್ದು ನಿಡ್ಲೆ ಗ್ರಾಮದ ಪಡಿತರ ಕೇಂದ್ರದಲ್ಲಿ ಅಂದಾಜು 50 ರಿಂದ 100 ಗೋಣಿ ಅಕ್ಕಿಯನ್ನು ಅನ್ಲೋಡ್ ಮಾಡಿ ತೆರಳಿದ್ದಾರೆ. ನಿಡ್ಲೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ನಾಗರಿಕರು ಅಕ್ಕಿ ಬಂದ ಖುಷಿಯಲ್ಲಿ ಸ್ಥಳಕ್ಕೆ ಬಂದು ನೋಡಿದಾಗ ಅವರಿಗೆ ಶಾಖ್ ಕಾದಿತ್ತು. 2024 ರಲ್ಲಿ ಪ್ಯಾಕ್ ಮಾಡಲಾದ ಗೋಣಿಯನ್ನು ತೆರೆದು ನೋಡಿದಾಗ ಅಕ್ಕಿ ಸಂಪೂರ್ಣವಾಗಿ ಹಾಳಾಗಿ ಅದರಲ್ಲಿ ಹುಳ ಆಗಿರುವುದು ಕಂಡು ಬಂತು. ಸ್ಥಳೀಯರು ಹೇಳುವ ಪ್ರಕಾರ ಈ ಅಕ್ಕಿಯನ್ನು ಪ್ರಾಣಿಗಳಿಗೆ ನೀಡಲು ಕೂಡಾ ಯೋಗ್ಯವಾಗಿಲ್ಲ ಅಷ್ಟು ಕೆಟ್ಟು ಹೋಗಿದೆ ಎನ್ನಲಾಗಿದೆ.ಈ ಬಗ್ಗೆ ಸ್ಥಳೀಯರೊಬ್ಬರು ಮಾತನಾಡಿದ್ದು, ಅನ್ನಭಾಗ್ಯದ ಅಕ್ಕಿ ಕೆಟ್ಟು ಹೋಗಿದೆ ಇದನ್ನು ನಾವು ಬಡವರು ಹೇಗೆ ಆಹಾರವಾಗಿ ತೆಗೆದುಕೊಳ್ಳುವುದು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿದ್ದು, ಹೊಟೇಲುಗಳಿಗೆ ದಾಳಿ ಮಾಡಿ ಅಲ್ಲಿನ ಆಹಾರದ ಗುಣಮಟ್ಟವನ್ನು ಪರೀಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದೇನೋ ನಿಜ, ಆದರೆ ಸರಕಾರದಿಂದ ನೀಡುವ ಅನ್ನಭಾಗ್ಯ ಅಕ್ಕಿ ಎರಡು ವರ್ಷ ಹಳೆಯದಾಗಿದ್ದರೂ ಇವರ ಗಮನಕ್ಕೆ ಭಾರದ್ದು ದುರಂತವೇ ಸರಿ. ಸಚಿವರು ಇನ್ನಾದರೂ ಈ ಬಗ್ಗೆ ಗಮನಹರಿಸಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗುವ ಆಹಾರ ಸಾಮಾಗ್ರಿಗಳ ಗುಣಮಟ್ಟವನ್ನು ಆಹಾರ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರೀಕ್ಷಿಸಿದರೆ ಬಡವರು ಉತ್ತಮ ಆಹಾರವನ್ನು ಪಡೆದು ನೆಮ್ಮದಿಯ ಬದುಕು ಬದುಕುವಂತಾಗಬಹುದು ಎಂಬುದು ಸಾರ್ವಜನಿಕರ ಆಶಯವಾಗಿದೆ.


