ಬೆಳ್ತಂಗಡಿ: ದಿನಂಪ್ರತಿ ನಾನಾ ರೀತಿಯ ಒತ್ತಡಗಳಿಂದ ಕೆಲಸಗಳನ್ನು ನಿರ್ವಹಿಸಿ ಗಂಭೀರ ಮೂಖ ಛಾಯೆಯನ್ನು ಹೊಂದಿಕೊಂಡು ಸಮಾಜದ ರಕ್ಷಣೆಯಲ್ಲಿ ಸದಾ ತೊಡಗಿಸಿಕೊಂಡಿರುವ ತಾಲೂಕಿನ ಪೊಲೀಸರು ತಮ್ಮ ಕುಟುಂಬದ ಸದಸ್ಯರೊಂದಿಗೆ, ಸಹೋದ್ಯೋಗಿ ಬಂಧುಗಳೊಂದಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಪರಸ್ಪರ ಸಂತೋಷವನ್ನು ಹಂಚಿಕೊಂಡರು.
ಈ ದೃಶ್ಯ ಕಂಡು ಬಂದಿದ್ದು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿಜಿಯವರ ನೇತೃತ್ವದಲ್ಲಿ ನಡೆದ ತಾಲೂಕಿನ ಪೊಲೀಸ್ ಕುಟುಂಬಗಳ ಪ್ರಪ್ರಥಮ ಸಮ್ಮಿಲನ ಕಾರ್ಯಕ್ರಮದಲ್ಲಿ.
ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ ಠಾಣೆ, ಸಂಚಾರಿ ಪೊಲೀಸ್ ಠಾಣೆ ಮತ್ತು ಗೃಹರಕ್ಷಕದಳ ವಿಭಾಗದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಮತ್ತು ಅವರ ಕುಟುಂಬದವರಿಗಾಗಿ ವಿಶೇಷ ರೀತಿಯ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಬೆಳಗ್ಗಿನ ಜಾವಾ ಪೊಲೀಸ್ ಠಾಣಾ ಆವರಣದಲ್ಲಿ ಪುರುಷರಿಗಾಗಿ ವಾಲಿಬಾಲ್, ಹಗ್ಗ ಜಗ್ಗಾಟ ಮತ್ತು ಮಹಿಳೆಯರಿಗೆ ತ್ರೋಬಾಲ್ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಹಾಗೂ ಪುಟಾಣಿ ಮಕ್ಕಳಿಗೆ ವಿಶೇಷ ರೀತಿಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಹಾಗೆಯೇ ಸಂಜೆ ನಡೆದ ಸಾಂಸ್ಕೃತಿಕ ರಸಸಂಜೆಗೆ ಮುಖ್ಯ ಅತಿಥಿಯಾಗಿ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿಗಳಿಂದ ಮತ್ತು ಕುಟುಂಬದವರ ಕೂಡುವಿಕೆಯಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಕಿರು ನಾಟಕವನ್ನು ಅಭಿನಯಿಸಿ ತೋರಿಸುವ ಮೂಲಕ ತಮ್ಮೊಳಗಿರುವ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೆರದಿದ್ದ ಎಲ್ಲರಿಗೂ ಭರ್ಜರಿ ಭೋಜನ ಕೂಟ ಏರ್ಪಡಿಸಲಾಗಿತ್ತು