ತಿರುಪತಿ: ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ತಿರುಪತಿ ದೇಗುಲದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವಂತಹ ದೇಗುಲದ ಪವಿತ್ರ ಲಡ್ದುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇರುವುದನ್ನು ಲ್ಯಾಬ್ ವರದಿ ದೃಢಪಡಿಸಿದೆ. ಈ ವಿಚಾರದ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ತಿರುಪತಿ ಲಡ್ದು ತಯಾರಿಕೆಯಲ್ಲಿ ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರಕಾರ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆರೋಪಿಸಿದ್ದರು. ಈ ಆರೋಪದ ಬೆನ್ನಲೇ ಲ್ಯಾಬ್ ವರದಿಯು ಇದನ್ನು ಧೃಡಪಡಿಸಿದೆ. ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿ ಪಕ್ಷ ಈ ಆರೋಪವನ್ನು ತಳ್ಳಿಹಾಕಿದೆ.

NDDB CALF ಪ್ರಯೋಗಾಲಯವು ಪಶು ಆಹಾರ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಸಂಸ್ಥೆಯಾಗಿದ್ದು, ಈ ಪ್ರಯೋಗಾಲಯವು ತಿರುಪತಿ ಲಡ್ದುಗಳನ್ನು ತಯಾರಿಸಲು ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ, ಬೀಫ್ ಟ್ಯಾಲೋ, ಹಂದಿಯ ಕೊಬ್ಬಿನ ಅಂಶ ಸೇರಿರುವುದನ್ನು ಬಹಿರಂಗಪಡಿಸಿದೆ ಎಂದು ತಿಳಿದು ಬಂದಿದೆ.
ಈ ವಿಚಾರದ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗಂಭೀರವಾಗಿ ಆರೋಪಿಸಿದ ನಂತರ, ಜಗನ್ ಮೋಹನ್ ರೆಡ್ಡಿ ಅವರನ್ನು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಕೂಡ ಈ ವಿಚಾರದ ಬಗ್ಗೆ ಗುರಿಯಾಗಿಸಿದ್ದಾರೆ ಎನ್ನಲಾಗಿದೆ.